ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ಭಕ್ತರು 14 ಕಿ.ಮೀ. ದೂರದ ದಂಡಗುಡು ಬಸವಣ್ಣ ದೇವಸ್ಥಾನದವರೆಗೆ 1 ಕ್ವಿಂಟಲ್ ಅಕ್ಕಿ ಚೀಲ ಹೊತ್ತು ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡು, ಹರಕೆ ತೀರಿಸಿದರು.
ಶ್ರಾವಣ ಮಾಸದ ಮೂರನೇ ಸೋಮವಾರ ಸಂಗನಬಸವ ಶಿವಾಚಾರ್ಯರ ನೇತೃತ್ವದಲ್ಲಿ ದಂಡಗುಂಡು ಬಸವಣ್ಣನ ಜಾತ್ರೆ ಜರುಗಿತು.
ಕಲಬುರಗಿ, ಚಿತ್ತಾಪುರ, ಯಾದಗಿರಿ ಸೇರಿ ಸುತ್ತಲಿನ ಗ್ರಾಮಗಳಿಂದ ಕೆಲ ಭಕ್ತರು ಪಾದಯಾತ್ರೆ, ಇನ್ನೂ ಕೆಲವರು ಬಸ್ಗಳಲ್ಲಿ ಬಂದರು. ದೇವರ ದರ್ಶನ ಪಡೆದರು.
ನಾಲವಾರದಿಂದ ಅಕ್ಕಿ ಚೀಲ ಹೊತ್ತ ಬಂದ ಭಕ್ತ ಮನೋಹರ ಮಾತನಾಡಿ, ‘ನಾಲ್ಕು ವರ್ಷಗಳಿಂದ ಅಕ್ಕಿ ಚೀಲ ಹೊತ್ತು ಪಾದಯಾತ್ರೆ ಮಾಡುತ್ತಿದ್ದೇವೆ. ಇದಕ್ಕೂ ಮೊದಲು ಊರಿನ ಭಕ್ತರು ನೀಡಿದ್ದ ಕಾಣಿಕೆ ಹಣವನ್ನು ತಂದು ದೇವಸ್ಥಾನದ ಹುಂಡಿಯಲ್ಲಿ ಹಾಕುತ್ತಿದ್ದೇವು. ಅದರ ಬದಲು ಮನೆ ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿ ಪಾದಯಾತ್ರೆ ಮೂಲಕ ಹೊತ್ತು ತಂದು ಅರ್ಪಿಸುತ್ತಿದ್ದೇವೆ’ ಎಂದರು.
ಮಲ್ಲಪ್ಪ ಪೂಜಾರಿ, ಭೀಮಣ್ಣ ಗಂಗಿಮನಿ, ಮಲ್ಲಪ್ಪ ಮಠದ್, ಮರೆಪ್ಪ ಬಳಬಾ, ತೋಟಪ್ಪ ಪೂಜಾರಿ, ಸಾಬಣ್ಣ ಪೂಜಾರಿ, ಸಿದ್ದಪ್ಪ ಹಲಕಟ್ಟಿ, ಸಾಬಣ್ಣ ಗೊಡಾಗ್, ರಮೇಶ್ ಹಲಕಟ್ಟಿ ಸೇರಿದಂತೆ ಹಲವು ಭಕ್ತರು ಸರದಿಯಂತೆ ಅಕ್ಕಿ ಚೀಲ ಹೊತ್ತರು.