ಕಲಬುರಗಿ: ವಿಶ್ವ ಹಿಂದೂ ಪರಿಷತ್ ಮಾತೃ ಶಕ್ತಿ ಹಾಗೂ ದುರ್ಗಾ ವಾಹಿನಿ ಕಲಬುರಗಿ ಮಹಾನಗರ ವತಿಯಿಂದ ಭಾನುವಾರ ಆಯೋಜಿಸಿದ್ದ ದುರ್ಗಾ ದೇವಿಯ ಶೋಭಾಯಾತ್ರೆ ವೈಭವದಿಂದ ಜರುಗಿತು.
ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಸುಲ್ತಾನಪುr ರಸ್ತೆ, ಪೊಲೀಸ್ ಚೌಕ್, ಸೂಪರ್ ಮಾರ್ಕೆಟ್ ವೃತ್ತ, ಬ್ರಹ್ಮಪುರ ಪೊಲೀಸ್ ಠಾಣೆಯ ಮಾರ್ಗವಾಗಿ ಜಗತ್ ವೃತ್ತದವರೆಗೆ ಶೋಭಾಯಾತ್ರೆ ಸಾಗಿತು.
ಬಣ್ಣ ಬಣ್ಣದ ಚೆಂಡು ಹೂಗಳು,ಬಾಳೆ ಸಸಿ, ಕೇಸರಿ ಧ್ವಜದೊಂದಿಗೆ ಅಲಂಕೃತವಾದ ಟ್ರ್ಯಾಕ್ಟರ್ನಲ್ಲಿಸಿಂಹದ ಮೇಲೆ ಕುಳಿದ ದುರ್ಗಾ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಉಪಾಧ್ಯಕ್ಷ ಲಿಂಗರಾಜಪ್ಪ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.
ದುರ್ಗಾ ದೇವಿಯ ಸಾವಿರಾರು ಮಹಿಳಾ ಮತ್ತು ಪುರುಷ ಭಕ್ತರು ಕೇಸರಿ ಶಾಲು, ಕೇಸರಿ ಪೇಟ ಧರಿಸಿ, ಕೈಯಲ್ಲಿ ಕೇಸರಿ ಧ್ವಜ ಹಿಡಿದು ಮೆರವಣಿಗೆ ಉದ್ದಕ್ಕೂ ಜೈಮಾತಾ, ಭಾರತ ಮಾತಾ ಕಿ ಜೈ ಘೋಷಣೆ ಕೂಗಿದರು. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಕೇಸರಿ ಧ್ವಜ ಕಟ್ಟಲಾಗಿತ್ತು. ಬಾಲಕಿಯರು ದುರ್ಗಾ ದೇವಿಯ ವೇಷದಲ್ಲಿ ಮಿಂಚಿದರು.
ಮಹಿಳೆಯರು ಭಕ್ತಿ, ದೇಶಭಕ್ತಿ ಗೀತೆಗಳಿಗೆ ಕೋಲಾಟ, ಹೆಜ್ಜೆ ಹಾಕಿದರು. ಕೆಲವರು ದುರ್ಗಾ ದೇವಿಯ ಸ್ಮರಣೆಯ ಭಜನೆ ಹಾಡುಗಳನ್ನು ಹಾಡಿದರು. ಮಹಿಳೆಯರು ಬೈಕ್ ಚಲಾಯಿಸಿ ಗಮನ ಸೆಳೆದರು. ಜಗತ್ ವೃತ್ತದಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು.
ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಸುನಿತಾ ಅಂಬಾದಾಸ ಶಿಂಧೆ, ಜ್ಯೋತಿ ರಾಜು ಗುತ್ತೇದಾರ, ಅನಿತಾ ಕಲಬುರಗಿ, ಶಿವಲೀಲಾ ಸೂರ್ಯಕಾಂತ, ಜಾಹ್ನವಿ ಮೋದಿ, ಇಂದಿರಾ ಬಾಯಿ ಗೋಡೆ, ಸುಧಾ ಕರಲಗಿಕರ್, ಮಂಜುಳಾ ಗುಪ್ತಾ, ಅಶ್ವಿನಕುಮಾರ್ ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.