ಕಲಬುರಗಿ: ಇಲ್ಲಿನ ಜನನಿಬಿಡ ರಾಮಮಂದಿರ ಬಳಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಹಾಕಿಕೊಂಡಿದ್ದ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಜೆಸಿಬಿಯಿಂದ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ವ್ಯಾಪಾರಿಗಳು, ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರ ವಣಿಕ್ಯಾಳ ರಸ್ತೆ ಒತ್ತುವರಿ ಮಾಡದಂತೆ ವ್ಯಾಪಾರಿಗಳಿಗೆ ತಿಳಿ ಹೇಳಿದ್ದರು.
ತೆರವುಗೊಳಿಸುವಂತೆ ಕೆಲ ದಿನಗಳ ಹಿಂದೆಯೇ ನೋಟಿಸ್ ಸಹ ನೀಡಲಾಗಿತ್ತು. ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಲು ವಿಫಲವಾಗಿದ್ದರಿಂದ ಪಾಲಿಕೆ ಅಧಿಕಾರಿಗಳು ಪೊಲೀಸರ ನೆರವಿನಿಂದ ತೆರವುಗೊಳಿಸಿದರು.
ವ್ಯಾಪಾರಿಗಳು ತೆರವಿಗೆ ಇನ್ನೊಂದಿಷ್ಟು ಸಮಯ ಕೊಡಬೇಕಿತ್ತು ಎಂದು ವಾಗ್ವಾದಕ್ಕಿಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಗಳು ಒಳಚರಂಡಿ ಹಾಗೂ ರಸ್ತೆ ಮೇಲೆ ಗೂಡಂಗಡಿ ಹಾಕಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಮಯ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಮ ಮಂದಿರವಲ್ಲದೇ ಇತರ ರಸ್ತೆಗಳಲ್ಲೂ ರಸ್ತೆ ಹಾಗೂ ಒಳಚರಂಡಿ ಅತಿಕ್ರಮಣ ಆಗಿರುವ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಎಂಜಿನಿಯರ್ಗಳಾದ ಸುಧೀರ ಮೇತ್ರೆ, ಪ್ರಭಾಕರ ತಿಳಿಸಿದರು.
ರಾಮಮಂದಿರ ವೃತ್ತವು ಹಲವು ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರಿಂದ ಅಲ್ಲಿ ಗೂಡಂಗಡಿ ಹಾಕದಂತೆ ವ್ಯಾಪಾರಿಗಳಿಗೆ ತಿಳಿ ಹೇಳಲಾಗಿತ್ತು. ಆದರೂ ವ್ಯಾಪಾರ ಮುಂದುವರಿಸಿದ್ದರಿಂದ ತೆರವುಗೊಳಿಸಲಾಯಿತು ಎಂದು ಪಾಲಿಕೆಯ ಆಯುಕ್ತಡಾ. ಶಂಕರ ವಣಿಕ್ಯಾಳ ತಿಳಿಸಿದರು.