ಕಲಬುರ್ಗಿ: ಪದವಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಿದ್ದನ್ನು ದಿಢೀರ್ ಭೇಟಿ ವೇಳೆ ಗಮನಿಸಿದ ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಅವರ ಸೂಚನೆ ಮೇರೆಗೆ ಬೀದರ್ನ ಸನ್ ಸಾಫ್ಟ್ ಪದವಿ ಕಾಲೇಜಿಗೆ ನೀಡಿದ್ದ ಪರೀಕ್ಷಾ ಕೇಂದ್ರದ ಮಾನ್ಯತೆಯನ್ನು ಕುಲಸಚಿವರು ರದ್ದುಗೊಳಿಸಿದ್ದಾರೆ.
ಕಿರಿಯ ಪರೀಕ್ಷಾ ಮೇಲ್ವಿಚಾರಕರು ಹಾಗೂ ಕಾಲೇಜಿನ ಸಿಬ್ಬಂದಿಯೂ ನಕಲು ಮಾಡಲು ಸಹಕಾರ ನೀಡಿದ್ದರು ಎಂಬುದನ್ನು ಕುಲಪತಿ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ, ಮಾನ್ಯತೆ ರದ್ದು ಮಾಡಲಾಗಿದೆ ಎಂದು ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ ತಿಳಿಸಿದ್ದಾರೆ.
ಮೂವರು ಎಂಪಿಸಿ: ಬೀದರ್ ಜಿಲ್ಲೆ ಚಿಟಗುಪ್ಪಾ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯ ಚಂದ್ರಶೇಖರ ಪದವಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಎಂಪಿಸಿ ಮಾಡಲಾಗಿದೆ. ಹುಮನಾಬಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಐದನೇ ಸೆಮಿಸ್ಟರ್ ಭೌತಶಾಸ್ತ್ರ ವಿಷಯದ ಒಬ್ಬ ವಿದ್ಯಾರ್ಥಿಯನ್ನು ಎಂಪಿಸಿ ಮಾಡಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.