ಕಮಲಾಪುರ: ನೂತನ ಪಿಂಚಣಿ ಯೋಜನೆ ತಡೆದು, ಹಳೆ ಪಿಂಚಣಿ ಜಾರಿಗೆ ಎಲ್ಲ ಇಲಾಖೆಗಳ ಸರ್ಕಾರಿ ನೌಕರರ ಸಂಘಟನಾತ್ಮಕ ಹೋರಾಟ ಅಗತ್ಯ ಎಂದು ರಾಜ್ಯ ಸರ್ಕಾರಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಸಂಘ್ಯದ ರಾಜ್ಯ ಘಟಕದ ಉಪಾಧ್ಯಕ್ಷ ಚಂದ್ರಕಾಂತ ತಳವಾರ ಹೇಳಿದರು.
ಪಟ್ಟಣದ ಶಿಕ್ಷಕರ ಕಲಿಕಾ ಕೇಂದ್ರ ದಲ್ಲಿ ಸೋಮವಾರ ಆಯೋಜಿಸಿದ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಹೋರಾಟ ಮತ್ತಷ್ಟು ಬಲಿಷ್ಠಗೊಳಿಸಲು ತಾಲ್ಲೂಕು ಮಟ್ಟದ ಘಟಕಗಳನ್ನು ರಚಿಸುತ್ತಿದ್ದೇವೆ. ಈ ಸಂಘಟನೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪರ್ಯಾಯವಾಗಿ ಕಟ್ಟಿಕೊಂಡಿದ್ದಲ್ಲ. ನಮ್ಮ ಹಕ್ಕು ಪಡೆಯಲು ರಚಿಸಿಕೊಂಡಿದ್ದು. ರಾಜ್ಯ ಸರ್ಕಾರಿ ನೌಕರರ ಸಂಘ ಮಾತೃ ಸಂಘಟನೆಯಾಗಿದ್ದು, ಅವರು ನಮಗೆ ಸಹಕಾರ ನೀಡಬೇಕು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ಯಳವಂತಗಿ ಮಾತನಾಡಿ, ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಎನ್ಪಿಎಸ್ ನೌಕರರನ್ನು ಸಂಪರ್ಕಿಸಿ ಸಂಘಟನೆಯನ್ನು ಬಲಪಡಿಸುತ್ತೇವೆ. ಹಳೆ ಪಿಂಚಣಿ ಯೋಜನೆಗೆ ಒಳಪಡುವ ನೌಕರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಎನ್ಪಿಎಸ್ ಹೋಗಲಾಡಿಸಿ ಒಪಿಎಸ್ ಪಡೆಯುವು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಿಟ್ಟಿಸಾಬ್ ಮುಲ್ಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಕಾರ್ಯದರ್ಶಿ ಮೆಹಬೂಬ್ ಮಡಕಿ, ಎನ್ಪಿಎಸ್ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿಬಣ್ಣ ಸಾಯಿಬಣ್ಣ ಮಹಾಂತಗೋಳ, ಸಂಘಟನಾ ಕಾರ್ಯ ದರ್ಶಿ ರೇಣುಕಾ ಶ್ರೀಕಂಠಯ್ಯ ಮಾತನಾಡಿದರು.
ತಾಲ್ಲೂಕು ಘಟಕದ ಪದಾಧಿಕಾರಿಗಳು: ಶಿಕ್ಷಕ ಶರಣಬಸಪ್ಪ ಯಳವಂತಗಿ (ಅಧ್ಯಕ್ಷ), ಜೆಸ್ಕಾಂ ಸಿಬ್ಬಂದಿ ದಿಲೀಪ (ಉಪಾಧ್ಯಕ್ಷ), ಆರೋಗ್ಯ ಇಲಾಖೆ ಸಿಬ್ಬಂದಿ ಗುರುಬಸಪ್ಪ ಸರಡಗಿ (ಪ್ರಧಾನ ಕಾರ್ಯದರ್ಶಿ), ಆರೋಗ್ಯ ಇಲಾಖೆಯ ಜ್ಯೋತಿ ಹಾಗೂ ಶಿಕ್ಷಕ ರಾಜಕುಮಾರ (ಸಂಘಟನಾ ಕಾರ್ಯದರ್ಶಿ), ಶಿಕ್ಷಕ ಗುರುಬಸಪ್ಪ ರಕ್ಕಸಗಿ ಹಾಗೂ ಗೌರಿ ರೆಡ್ಡಿ (ಸಹ ಕಾರ್ಯದರ್ಶಿ) ಅವರನ್ನು ಸನ್ಮಾನಿಸಲಾಯಿತು.