ಕಲಬುರ್ಗಿ: ಕಲಬುರ್ಗಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ಇ. ಲಕ್ಕಪ್ಪ ಅವರು ಮಂಗಳವಾರ ₹ 75 ಸಾವಿರ ಲಂಚ ಪಡೆಯುತ್ತಿದ್ದ ವೇಳೆಯೇ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ನಗರದ ಸಿಐಬಿ ಕಾಲೊನಿಯ ನಿವಾರಿ ನಾಗರಾಜ ಗಿರಿ ಎಂಬುವವರು ಹೊಸದಾಗಿ ಪದವಿಪೂರ್ವ ಕಾಲೇಜು ಆರಂಭಿಸುತ್ತಿದ್ದು, ಕಟ್ಟಡ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ (ಎನ್ಒಸಿ) ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಪತ್ರ ನೀಡಲು ಲಕ್ಕಪ್ಪ ಅವರು ₹ 75 ಸಾವಿರ ಲಂಚ ಕೇಳಿದ್ದರು. ವಿಷಯವನ್ನು ನಾಗರಾಜ ಅವರು ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದರು.
ಲಕ್ಕಪ್ಪ ಅವರು ಮಂಗಳವಾರ ಮಧ್ಯಾಹ್ನ 2ರ ಸುಮಾರಿಗೆ ಪ್ರಾದೇಶಿಕ ಅಗ್ನಿಶಾಮಕ ಕಚೇರಿಯಲ್ಲೇ ಪೂರ್ತಿ ಲಂಚದ ಹಣ ಪಡೆಯುತ್ತಿದ್ದರು. ಇದೇ ವೇಳೆಯೇ ಬಲೆ ಬೀಸಿದ ಅಧಿಕಾರಿಗಳು ಅವರನ್ನು, ಹಣದ ಸಮೇತ ಬಂಧಿಸಿದರು.