ಗಣೇಶೋತ್ಸವ: ಪರವಾನಗಿಗೆ ಏಕಗವಾಕ್ಷಿ ವ್ಯವಸ್ಥೆ

ಕಲಬುರ್ಗಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪೊಲೀಸ್, ಜೆಸ್ಕಾಂ ಮತ್ತು ಮಹಾನಗರ ಪಾಲಿಕೆಯ ಪರವಾನಿಗೆ ಪಡೆಯಲು ಮಹಾನಗರ ಪಾಲಿಕೆ ಕಚೇರಿಯಲ್ಲಿ ವಿಶೇಷ ಕೌಂಟರ್ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.
ಗಣೇಶೋತ್ಸವ ಅಂಗವಾಗಿ ಗುರುವಾರ ಇಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸೌಲಭ್ಯ ಕಲ್ಪಿಸಿರುವುದನ್ನು ಪರಿಶೀಲಿಸಲು ನಗರದಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟರನ್ನು ನೇಮಿಸುವುದಾಗಿಯೂ ಅವರು ಹೇಳಿದರು.
‘ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಸ್ಥಳ ವಿವಾದಕ್ಕೆ ಒಳಪಟ್ಟಿರಬಾರದು. ಶಾಮಿಯಾನಕ್ಕೆ 24 ಗಂಟೆಗಳ ಕಾಲ ಕಾವಲು ಇರಬೇಕು. ಬೆಂಕಿ ಅವಘಡ ಸಂಭವಿಸದಂತೆ ಜಾಗೃತಿ ವಹಿಸಬೇಕು. ಎತ್ತರದ ವಿಗ್ರಹ ತರುವಾಗ ರಸ್ತೆ ಮಧ್ಯದ ವಿದ್ಯುತ್ ತಂತಿಗೆ ತಾಗದಂತೆ ಎಚ್ಚರ ವಹಿಸಬೇಕು. ಅನವಶ್ಯಕವಾಗಿ ಬಣ್ಣಗಳನ್ನು ತೂರಿ ಮತೀಯ ಗಲಭೆ ಸೃಷ್ಟಿಸಬಾರದು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಸಲಹೆ ನೀಡಿದರು.
ಮೇಯರ್ ಶರಣಕುಮಾರ ಮೋದಿ ವೇದಿಕೆಯಲ್ಲಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.