ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿನ ಶಿವಲಿಂಗೇಶ್ವರ ಮಠಕ್ಕೆ ಭಕ್ತರು ಅರ್ಪಿಸಿದ ಜೋಳದ ತೆನೆಗಳ ರಾಶಿ ಮಾಡುವ ಹಂತಿ ಉತ್ಸವ ಶಾಂತಲಿಂಗೇಶ್ವರ ಗವಿಮಠದ ಆವರಣದಲ್ಲಿ ನಡೆಯಿತು.
ಬೆಳದಿಂಗಳಲ್ಲಿ ರೈತರೂ ಮೇಟಿ ಹೊಡೆದು ಸುತ್ತಲು ಜೋಳದ ತೆನೆ ಸಂಗ್ರಹಿಸಿಟ್ಟಿದ್ದರು. ವಿವಿಧ ಗ್ರಾಮಗಳ ರೈತರು ಬೆಳೆದ ಜೋಳದ ತೆನೆ ಶಿವಲಿಂಗೇಶ್ವರ ಮಠಕ್ಕೆ ಸಮರ್ಪಿಸುವುದು ವಾಡಿಕೆ.
ಹಂತಿ ಕಟ್ಟಿ ರಾಶಿ ಮಾಡುವ ಆಚರಣೆಗೆ ವಿರಕ್ತಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ, ಹಿರೇಮಠನ ಶಾಂತಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಮೇಟಿ ಪೂಜೆ , ಜೋಳದ ಖಣದ ಪೂಜೆ ಕೈಗೊಳ್ಳಲಾಯಿತು.
ಮಹಿಳೆಯರಿಂದ ಜೋಳದ ಗೂಡು ಮುರಿಯುವದು ಮತ್ತಿತರ ಸಂಪ್ರಾದಾಯಿಕ ಆಚರಣೆಗಳು ನಡೆದವು. ಜೋಡೆತ್ತುಗಳ ಮೂಲಕ ಮೇಟಿ ಸುತ್ತ ಹಂತಿ ಹೊಡೆಯುವದು ವಿಶೇಷವಾಗಿತ್ತು. ಜನಪದ ಕಲಾವಿದರ ಹಂತಿ ಹಾಡುಗಳ ಗಾಯನ ಉತ್ಸವಕ್ಕೆ ಕಳೆ ತಂದಿತು.
ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿದರು.
ಶಾಂತವೀರ ಸ್ವಾಮೀಜಿ, ಶಿವದೇವಿ ಮಾತಾಜಿ ಉಪಸ್ಥಿತರಿದ್ದರು. ಗದ್ದೆಪ್ಪ ಸಕ್ಕರಗಿ, ಮಲ್ಲಪ್ಪ ಪ್ಯಾಟಿ, ಶಾಂತಮಲ್ಲಪ್ಪ ಬುರುಡ, ಶರಣಬಸಪ್ಪ ಕಡಗಂಚಿ, ಶಿವಪುತ್ರಪ್ಪ ಸಾಲಿ, ಸಿದ್ದಾರೂಡ ಕಂಬಾರ, ಅಂಬಣ್ಣಾ ಮಾಸ್ತರ್, ಶಿವಲಿಂಗಪ್ಪ ಪರೀಟ ಅವರಿಂದ ರಾತ್ರಿ ಹಂತಿ ಹಾಡುಗಳ ಗಾಯನ ಜರುಗಿದವು.