ಆಳಂದ: ಶನಿವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮದಲ್ಲಿನ ಹಳ್ಳಕೊಳ್ಳಗಳು ತುಂಬಿ ಹರಿದಿವೆ.
ಮಳೆ ನೀರು ರೈತರ ಹೊಲಗದ್ದೆ, ಬಾವಿಗಳಿಗೆ ನುಗ್ಗಿ ಹಾನಿ ಮಾಡದಲ್ಲದೆ ಕೆಲವಡೆ ಬೆಳೆದು ನಿಂತ ಬೆಳೆಗಳೂ ಕೊಚ್ಚಿಕೊಂಡು ಹೋದ ದೃಶ್ಯಗಳು ಕಂಡು ಬಂದಿವೆ.
ಮುಖ್ಯವಾಗಿ ಅಮರ್ಜಾ ನದಿಯ ಹಿನ್ನೀರು ಪ್ರದೇಶದ ಖಜೂರಿ ವಲಯದಲ್ಲಿ ಅಧಿಕ ಮಳೆಯಾಗಿದೆ. ಹೀಗಾಗಿ ಸಾಲೇಗಾಂವ ಕೆರೆ ಸಂಪೂರ್ಣ ಭರ್ತಿಯಾಗಿ ನೀರು ಹೊರ ಬೀಡಲಾಗುತ್ತೀದೆ. ಈ ಕೆರೆಯಿಂದ ಹೆಚ್ಚುವರಿ ನೀರು ಗ್ರಾಮದ ಮುಖ್ಯಬೀದಿಯವರೆಗೆ ನುಗ್ಗಿದೆ.
ಸಾಲೇಗಾಂವ ಕೆರೆ ಸುತ್ತಲಿನ 10ಕ್ಕೂ ಹೆಚ್ಚು ರೈತರ ಬಾವಿಗಳು ಮುಳುಗಿವೆ. ತೊಗರಿ, ಸೋಯಾಬಿನ್ ಬೆಳೆ ಹಾನಿಯಾಗಿದೆ. ಮಟಕಿ ಗ್ರಾಮದಲ್ಲಿ ಅಧಿಕ ಹಾನಿಯಾಗಿದೆ.
ರೈತ ಸೈಬಣ್ಣಾ ಬಿರಾದಾರ, ಪ್ರಶಾಂತ ಬಿರಾದಾರ ರೈತರು ಹೊಲದಲ್ಲಿ ರಾಶಿಗಾಗಿ ಸಂಗ್ರಹಿಸಿಟ್ಟಿದ 3 ಎಕರೆ ಉದ್ದು ಬೆಳೆ, 8 ತಾಡಪತ್ರೆ ಸಮೇತ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಕಬ್ಬು ಬೆಳೆಯು ಸಹ ಸಂಪೂರ್ಣ ನೀರಲ್ಲಿ ಮುಳಗಿದೆ.
ಹೆಬಳಿ , ತೀರ್ಥ ಹಳ್ಳಗಳು ತುಂಬಿ ಹರಿಯುತ್ತೀರುವ ಪರಿಣಾಮ ಸಂಪರ್ಕ ಸ್ಥಗಿತವಾಗಿದೆ. ಮಟಕಿ- ತೀರ್ಥ ಮಧ್ಯದ ಸಣ್ಣ ಸೇತುವೆಯು ನೀರಿನ ಆಘಾತಕ್ಕೆ ಹಾನಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ.
ಭಾರಿ ಮಳೆಗೆ ಹೆಬಳಿ, ಜೀರಹಳ್ಳಿ, ಶಕಾಪುರ, ಪಡಸಾವಳಿ ಹಳ್ಳಗಳಿಗೆ ಹೆಚ್ಚಿನ ನೀರು ಬಂದ ಪರಿಣಾಮ ಅಮರ್ಜಾ ಅಣೆಕಟ್ಟೆಗೂ ನೀರು ಬರುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಮುನ್ನೆಚ್ಚೆರಿಕೆ ಕ್ರಮವಾಗಿ ನೂರು ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇಂದು ಅಣೆಕಟ್ಟೆಯಿಂದ ನೀರು ಬಿಡಲಾಗುತ್ತೀದೆ.