ಸೇಡಂ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಪಟ್ಟಣದ ತಾಲ್ಲೂಕು ಆಡಳಿತಸೌಧದಲ್ಲಿ ಅ.13ರಂದು ಬೆ.9 ಗಂಟೆಗೆ ಉದ್ಯೋಗ ಮೇಳ ನಡೆಯಲಿದೆ.
ಕಾರ್ಯಕ್ರಮದ ಯಶಸ್ವಿಗೆ ಬೇಕಾದ ಸಕಲ ಸಿದ್ಧತೆಗಳು ಮುಗಿದಿದೆ. ಗುರುವಾರ ಸಂಜೆ ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ಕೌಶಲ್ಯಾಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಗೌಡ ಹಾಗೂ ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಸಂದೀಪಸಿಂಗ ಮುರಗೋಡ ನೇತೃತ್ವದಲ್ಲಿ ಕೊನೆಯ ಸಿದ್ಧತೆ ಪರಿಶೀಲನೆ ನಡೆಯಿತು.
‘ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಉದ್ಯೋಗ ಮೇಳಕ್ಕೆ ಚಾಲನೆ ಸಿಗಲಿದೆ. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಇಲಾಖೆಗಳ ಸಿಬ್ಬಂದಿ ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯಿಂದ 250 ಸಿಬ್ಬಂದಿ ಬಂದೋಬಸ್ತ್ ಇರಲಿದೆ. ಜೊತೆಗೆ ಊಟ ಸೇರಿದಂತೆ ಇನ್ನಿತರ ಕೆಲಸಕ್ಕಾಗಿ ಸ್ವಯಂ ಸೇವಕರನ್ನ ಬಳಸಿಕೊಳ್ಳಲಾಗುತ್ತಿದೆ’ ಎಂದು ಕೌಶಲ್ಯಾಭಿವೃದ್ಧಿ ನಿಗಮ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಸುಮಾರು 86ಕ್ಕೂ ಹೆಚ್ಚು ಕಂಪನಿಗಳಿಂದ ಆಗಮಿಸುತ್ತಿರುವ ಪ್ರತಿನಿಧಿಗಳಿಗೆ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ.
ಉದ್ಘಾಟನೆ: ಕಾರ್ಯಕ್ರಮವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ವಿಶೇಷ ಅಹ್ವಾನಿತರಾಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಪೊಲೀಸ್ ಮಹಾನಿರ್ದೇಶಕ ಅಜಯ ಹಿಲೋರಿ, ಕೆಕೆಆರ್ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು, ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಆಕಾಶ ಆಗಮಿಸಲಿದ್ದಾರೆ.
Quote - ಉದ್ಯೋಗ ಮೇಳದ ಯಶಸ್ಸಿಗೆ ಸಂಪೂರ್ಣ ವ್ಯವಸ್ಥೆಯೊಂದಿಗೆ ತಯಾರಿ ಮಾಡಿಕೊಳ್ಳಲಾಗಿದ್ದು ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಕೃಷ್ಣಕುಮಾರ ಕಾರ್ಯನಿರ್ವಾಹಕ ನಿರ್ದೇಶಕ ಕೌಶಲ್ಯಾಭಿವೃದ್ಧಿ ನಿಗಮ
ಈ ಭಾಗದಲ್ಲಿ ನಿರುದ್ಯೋಗ ತಾಂಡವಾಡುತ್ತಿರುವ ಸಮಸ್ಯೆಯನ್ನು ಗಮನಿಸಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರ ಲಾಭವನ್ನು ಈ ಭಾಗದ ಯುವಕ-ಯುವತಿಯರು ಪಡೆದುಕೊಳ್ಳಬೇಕು- ಡಾ.ಶರಣಪ್ರಕಾಶ ಪಾಟೀಲ, ಸಚಿವ
ಉದ್ಯೋಗ ಮೇಳದ ಯಶಸ್ಸಿಗೆ ಸಂಪೂರ್ಣ ವ್ಯವಸ್ಥೆಯೊಂದಿಗೆ ತಯಾರಿ ಮಾಡಿಕೊಳ್ಳಲಾಗಿದ್ದು ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ- ಕೃಷ್ಣಕುಮಾರ, ಕಾರ್ಯನಿರ್ವಾಹಕ ನಿರ್ದೇಶಕ ಕೌಶಲ್ಯಾಭಿವೃದ್ಧಿ ನಿಗಮ
ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಮತ್ತು ಯೂತ್ಕ್ಲಬ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳಕ್ಕೆ ತೆರಳಲು ಮಾರ್ಗಸೂಚಿಗಳ ನಾಮಫಲಕ ಉದ್ಯೋಗ ಮೇಳದ ಮಾಹಿತಿ ಬ್ಯಾನರ್ ಹಾಕಲಾಗಿದೆ.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಮುಂದೆ ಮತ್ತು ಎಡಭಾಗದ 26 ಕೌಂಟರ್ಗಳಲ್ಲಿ ನೋಂದಣಿ ನಡೆಯಲಿದ್ದು ಪ್ರತಿ ಕೌಂಟರ್ಗೆ ಒಬ್ಬ ಸ್ವಯಂ ಸೇವಕ ಮಾರ್ಗದರ್ಶಕ ಮತ್ತು ಕಂಪ್ಯೂಟರ್ ಆಪರೇಟರ ಇರಲಿದ್ದಾರೆ.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ನೆಲಮಹಡಿ ಒಂದನೆ ಮತ್ತು ಎರಡನೇ ಮಹಡಿಯಲ್ಲಿ ಪದವಿ ಪೂರೈಸಿದ ಮತ್ತು ಪದವಿಗಿಂತ ಮೇಲ್ಪಟ್ಟವರಿಗೆ ಸಂದರ್ಶನ ನಡೆಯಲಿದೆ. ಸುಮಾರು 60 ಕೊಠಡಿಗಳಲ್ಲಿ ಸಂದರ್ಶನ ನಡೆಯಲಿದೆ.
ಸರ್ಕಾರಿ ಕನ್ಯಾಪ್ರೌಢಶಾಲೆಯ ಮೈದಾನದಲ್ಲಿ ಎಸ್ಸೆಸ್ಸೆಲ್ಸಿ ಪಿಯುಸಿ ಪಾಸಾದ ಮತ್ತು ಐಟಿಐ ಪಾಸಾದವರಿಗೆ ಸಂದರ್ಶನ ನಡೆಯಲಿದ್ದು ಸುಮಾರು 50 ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.