ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮನ್ವಯತೆಯಿಂದ ಕಾರ್ಯನಿರ್ವಹಿಸಿ’

ಫೆಬ್ರವರಿ 24 ರಿಂದ ಮೂರು ದಿನಗಳ ಕಲ್ಯಾಣ ಕರ್ನಾಟಕ ಉತ್ಸವ: ಅನಿರುದ್ಧ ಶ್ರವಣ
Last Updated 2 ಫೆಬ್ರುವರಿ 2023, 15:19 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕದ ಕಲೆ, ಸಂಸ್ಕೃತಿ ಅನಾವರಣಗೊಳಿಸುವ ‘ಕಲ್ಯಾಣ ಕರ್ನಾಟಕ ಉತ್ಸವ’ ಫೆಬ್ರವರಿ 24ರಿಂದ 26ರವರೆಗೆ ಕಲಬುರಗಿಯಲ್ಲಿ ಜರುಗಲಿದೆ. ಉತ್ಸವ ಯಶಸ್ಸಿಗೆ ರಚನೆ ಮಾಡಿರುವ ವಿವಿಧ ಸಮಿತಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಹೇಳಿದರು.

ಉತ್ಸವಕ್ಕಾಗಿ ರಚಿಸಲಾಗಿರುವ ವಿವಿಧ ಸಮಿತಿಗಳೊಂದಿಗೆ ಇಲ್ಲಿನ ಕೆಕೆಆರ್‌ಡಿಬಿ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿ ಅವರು ಮಾತನಾಡಿದರು.

‘ಗುಲಬರ್ಗಾ ವಿಶ್ವವಿದ್ಯಾಲಯದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿಯೇ ಉತ್ಸವ ನಡೆಯಲಿದೆ. 100X60 ಚದರ ಅಡಿ ಮುಖ್ಯ ವೇದಿಕೆ ಜೊತೆಗೆ, ಡಾ. ಬಿ.ಆರ್.ಅಂಬೇಡ್ಕರ್ ಭವನ ಮತ್ತು ವಿ.ವಿ ಬಯಲು ರಂಗಮಂದಿರದಲ್ಲಿ ಎರಡು ಉಪ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ’ ಎಂದರು.

‘ಮೂರು ದಿನಗಳ ಉತ್ಸವಕ್ಕೆ ಇತರೆ ಜಿಲ್ಲೆ, ರಾಜ್ಯಗಳಿಂದ ಬರುವ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು, ಬಾಲಿವುಡ್, ಸ್ಯಾಂಡಲ್‍ವುಡ್ ಕಲಾವಿದರ ಊಟ, ವಸತಿ, ಸಾರಿಗೆ ಹೀಗೆ ಪ್ರತಿಯೊಂದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ವಿವಿಧ ಸಮಿತಿಗಳನ್ನು ರಚಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ’ ಎಂದರು.

‘ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಹಿಸಬೇಕು. ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಂಪೂರ್ಣ ಖರ್ಚು-ವೆಚ್ಚವನ್ನು ಮಂಡಳಿ ಭರಿಸಲಿದೆ. ಸುಮಾರು 20 ರಿಂದ 40 ಸಾವಿರ ಆಸನ ವ್ಯವಸ್ಥೆ ಮಾಡಲಾಗುವುದು. ಪ್ರತಿ ದಿನ ಖ್ಯಾತ ಚಲನಚಿತ್ರ ನಟರು, ಗಾಯಕರು, ಕಲಾವಿದರು ಬರುವುದರಿಂದ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಜಿಲ್ಲೆಯ ವಿವಿಧ ಕಡೆಯಿಂದ ಸಾರ್ವಜನಿಕರಿಗೆ ಆಗಮಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ವೇದಿಕೆ ಸುತ್ತಮುತ್ತಲು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಉತ್ಸವದ ಆರಂಭದ ದಿನದಂದು ಪ್ರದೇಶದ ಏಳು ಜಿಲ್ಲೆಗಳ ಸಾಂಸ್ಕೃತಿಕ, ಜಾನಪದ ಕಲಾ ತಂಡಗಳು ಮತ್ತು ಕುಂಭಕಳಸದೊಂದಿಗೆ ಭವ್ಯ ಮೆರವಣಿಗೆ, ನಗರದ ನಿಗದಿತ ಸ್ಥಳದಿಂದ ವೇದಿಕೆ ಸ್ಥಳದವರೆಗೆ ಜಾನಪದ ಶೋಭಾಯಾತ್ರೆ ಸಾಗಲಿದೆ’ ಎಂದರು.

ಹೆಲಿಕಾಪ್ಟರ್‌ ರೈಡ್‌ ಪ್ರಮುಖ ಆಕರ್ಷಣೆ: ಉತ್ಸವದಲ್ಲಿ ಪ್ರಮುಖವಾಗಿ ಹೆಲಿಕಾಫ್ಟರ್ ರೈಡ್ ಸಾರ್ವಜನಿಕರ ಆಕರ್ಷಣೆಯಾಗಲಿದೆ. ಹೆಲಿಪ್ಯಾಡ್ ನಿರ್ಮಾಣ ಮತ್ತು ಹೆಲಿರೈಡ್‍ಗೆ ಸಿದ್ಧತೆ ಮಾಡಿಕೊಳ್ಳುವಂತೆ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಚರ್ಚಿಸುವಂತೆ ತಿಳಿಸಿದರು. ಜೊತೆಗೆ ಮ್ಯಾರಥಾನ್, ಸೈಕಲ್‌ಥಾನ್, ಹಾಟ ಏರ್‌ಬಲೂನ್‍ಗಳ ಹಾರಾಟ ಸಹ ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಡಿ. ಬದೋಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತೆ ಗರಿಮಾ ಪನ್ವಾರ್, ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ಮಹಾನಗರ ಪಾಲಿಯ ಆಯುಕ್ತ ಪಾಟೀಲ ಭುವನೇಶ ದೇವಿದಾಸ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ ದೀಪನ್ ಎಂ.ಎನ್., ಕೆಕೆಆರ್‌ಡಿಬಿ ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಜಗನ್ನಾಥ ಹಲಿಂಗೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT