ಕಲಬುರ್ಗಿ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ಕಲಬುರ್ಗಿ ಪೀಠ ಕಾರ್ಯಾರಂಭ ಮಾಡುವ ಕನಸು ಕೆಲವೇ ದಿನಗಳಲ್ಲಿ ನನಸಾಗುವ ಸಾಧ್ಯತೆ ಇದೆ.
ಕೆಎಟಿ ಪೀಠಕ್ಕಾಗಿ ಇಲ್ಲಿಯ ಜಿಲ್ಲಾ ನ್ಯಾಯಾಲಯ ಹಿಂಬದಿಯ ಖಾಸಗಿ ಕಟ್ಟಡವನ್ನು ಈಗಾಗಲೇ ಬಾಡಿಗೆ ಪಡೆಯಲಾಗಿದೆ. ಅಲ್ಲಿ ಕೋರ್ಟ್ ಹಾಲ್, ಸಿಬ್ಬಂದಿ ಕೊಠಡಿ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿದ್ದು, ಇನ್ನೂ ಕೆಲ ಕಾಮಗಾರಿ ನಡೆಯಬೇಕಿದೆ.
ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರು ಈಚೆಗೆ ನಗರಕ್ಕೆ ಭೇಟಿ ನೀಡಿ ಕಟ್ಟಡ ಮತ್ತು ಅಲ್ಲಿಯ ಕಾಮಗಾರಿ ಪರಿಶೀಲಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಆಗಬೇಕಿರುವ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ.
‘ಪೀಠ ಆರಂಭಕ್ಕೆ ಬೇಕಿರುವ ಮೂಲಸೌಲಭ್ಯಗಳ ಕೊರತೆ ಇಲ್ಲ. ಕೆಎಟಿ ಸದಸ್ಯರು ಹಾಗೂ ಸಿಬ್ಬಂದಿ ನೇಮಕವಾಗುವುದಷ್ಟೇ ಬಾಕಿ ಇದೆ. ನಮ್ಮ ಸಂಘದ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಪ್ರಯತ್ನ ಮುಂದುವರೆಸಿದ್ದು, ಶುಭಗಳಿಗೆ ಸನಿಹದಲ್ಲಿದೆ’ ಎನ್ನುತ್ತಾರೆ ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ.
‘ಕಲಬುರ್ಗಿ ಮತ್ತು ಬೆಳಗಾವಿ ಪೀಠಗಳು ಏಕಕಾಲಕ್ಕೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಪ್ರತಿ ಪೀಠದಲ್ಲಿ ಮೂವರು ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ. ನ್ಯಾಯಮೂರ್ತಿಗಳ ವಸತಿ ಗೃಹ, ಸಿಬ್ಬಂದಿ ವಸತಿ ಗೃಹ ಆಗಬೇಕಿದೆ. ಈ ಬಗ್ಗೆಯೂ ಚರ್ಚೆ ನಡೆದಿದೆ’ ಎಂದು ಅವರು ಹೇಳುತ್ತಾರೆ.