ಕಲಬುರಗಿ: ಗ್ರಾಹಕರು ಸಮೃದ್ಧರಾದರೆ ಮಾತ್ರ ಬ್ಯಾಂಕುಗಳು ಸಮೃದ್ದವಾಗುತ್ತವೆ. ಬ್ಯಾಂಕುಗಳು ವ್ಯಾವಹಾರಿಕವಾಗಿ ನೋಡದೇ ಸೇವೆಯ ಮನೋಭಾವ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಭಾಗ್ಯರೇಖಾ ಎಸ್. ಹೇಳಿದರು.
ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಈಚೆಗೆ ನಡೆದ ಸಾಲಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಗ್ರಾಹಕರಿಗೆ ಉಪಯೋಗವಾಗುವ ಹಲವು ವಿಮಾ ಯೋಜನೆಗಳಿವೆ. ಅವುಗಳನ್ನು ಜನರಿಗೆ ಮುಟ್ಟಿಸುವ ಕೆಲಸವಾಗಬೇಕು. ಕೃಷಿ ಸಾಲ, ವಾಹನ ಸಾಲ, ಮನೆ ನಿರ್ಮಾಣದಂತಹ ಯೋಜನೆಗಳಿಗೆ ಕಡಿಮೆ ದರದಲ್ಲಿ ಸಾಲ ನೀಡಲಾಗುತ್ತಿದೆ. ಠೇವಣಿ ಇಡುವ ಹಣಕ್ಕೂ ಖಾತ್ರಿಯಿದೆ. ಹೊಸದಾಗಿ ನಿವೇಶನ ಖರೀದಿ ಮಾಡಲು ಸಹ ಬ್ಯಾಂಕ್ ಸಾಲ ನೀಡುತ್ತದೆ’ ಎಂದು ತಿಳಿಸಿದರು.
ಎಜಿಎಂ ಗುರುರಾಜ್ ಎಸ್. ಮಾತನಾಡಿ, ‘ಬ್ಯಾಂಕಿನ ಜೊತೆಗೆ ಗ್ರಾಹಕರು ಒಳ್ಳೆಯ ಸಂಬಂಧ ಇಟ್ಟುಕೊಳ್ಳಬೇಕು. ಬ್ಯಾಂಕಿನಿಂದ ಬೆಲ್ಲ ತಯಾರಿಕೆ ಮಾಡುವವರಿಗೂ ₹ 30 ಲಕ್ಷ ಸಾಲ ನೀಡಿದ್ದೇವೆ. ಇದರಲ್ಲಿ ಅರ್ಧ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗಿದೆ’ ಎಂದರು.
ಕುಡಾ ಅಧ್ಯಕ್ಷ್ಯ ಅವಿನಾಶ ಕುಲಕರ್ಣಿ, ಪ್ರದೀಪ್ ಕುಮಾರ್ ತಿಗಡಿ, ದತ್ತಾತ್ರೇಯ ಕುಲಕರ್ಣಿ, ಜಿಲ್ಲಾ ಹಾಗೂ ತಾಲ್ಲೂಕು ಶಾಖೆಯ ಶಾಖಾಧಿಕಾರಿಗಳು ಇದ್ದರು.