ಕಲಬುರ್ಗಿ: ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾದ ಡಾ.ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನವನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮಂಗಳವಾರ ನಗರದಲ್ಲಿ ಅದ್ಧೂರಿಯಾಗಿ ಆಚರಿಸಿದರು.
ಕೊರೊನಾ ಪ್ರಯುಕ್ತ ತಮ್ಮ ಜನ್ಮದಿನವನ್ನು ಆಚರಿಸುವ ಬದಲು ಬಡವರಿಗೆ, ಕೊರೊನಾ ಸಂಕಷ್ಟದಿಂದ ನೆರವಾದವರಿಗೆ ನೆರವಾಗಿ ಎಂದು ಖರ್ಗೆ ಅವರು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಅದರಂತೆ ಮುಖಂಡ ಮಜರ್ ಆಲಂಖಾನ್ ನೇತೃತ್ವದಲ್ಲಿ ಖಾಜಾ ಬಂದೇನವಾಜ್ ದರ್ಗಾ ಆವರಣ ಹಾಗೂ ಜಿಮ್ಸ್ ಆಸ್ವತ್ರೆಯಲ್ಲಿ, ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಹಾಗೂ ಬಡವರಿಗೆ ಅನ್ನಸಂತರ್ಪಣೆ ಮಾಡಲಾಯಿತು. ರೋಜಾ ಪೋಲಿಸ್ ಠಾಣೆಯಲ್ಲಿ ಮಾಸ್ಕ್, ಸ್ಯಾನಿಟೈಜರ್ಗಳನ್ನು ವಿತರಿಸಲಾಯಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಈರಣ್ಣ ಝಳಕಿ, ಪ್ರವೀಣಕುಮಾರ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಸಂತೋಷ ಪಾಟೀಲ್ ದಣ್ಣೂರ, ಓಯೇಜ ಶೇಖ್, ಖುಸ್ರೊ ಜಹಗೀರದಾರ, ಲಿಂಗರಾಜ ತಾರಫೈಲ್ ಇತರರು ಇದ್ದರು.
ಸೇಡಂ ರಸ್ತೆಯಲ್ಲಿನ ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ರಾಜ್ಯ ಸಭಾ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಭಾವ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಜನ್ಮದಿನವನ್ನು ಕಾರ್ಯಕರ್ತರು ಆಚರಿಸಿದರು.
ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಜಿಡಿಎ ಲೇಔಟ್ ಉದ್ಯಾನವನದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ರಾಜ್ಯ ಸಭಾ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮ ಪಾಟೀಲ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಮಾಸ್ಕ ವಿತರಣೆ ಹಾಗೂ ಉಪಹಾರ ವಿತರಿಸಿದರು.