ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸರ್ಕಾರಿ ಆಸ್ತಿಗೆ ಭೂಗಳ್ಳರ ಕಾಟ...!

Published 28 ಆಗಸ್ಟ್ 2023, 4:51 IST
Last Updated 28 ಆಗಸ್ಟ್ 2023, 4:51 IST
ಅಕ್ಷರ ಗಾತ್ರ

ಮನೋಜಕುಮಾರ್ ಗುದ್ದಿ

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರದ ನೂರಾರು ಎಕರೆ ಭೂಮಿ, ಕೆರೆ, ಗೋಮಾಳ, ಶಾಲೆಗೆಂದು ಮೀಸಲಿಟ್ಟ ಜಾಗ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ಮಂದಗತಿಯಲ್ಲಿ ನಡೆದಿರುವ ಕಾರಣ ಒತ್ತುವರಿದಾರರು ನಿರಾತಂಕವಾಗಿದ್ದಾರೆ.

ಸಮಾಜದಲ್ಲಿ ಬಲಾಢ್ಯರು ಎನಿಸಿಕೊಂಡವರೇ ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡು ಬೀಗುತ್ತಿದ್ದಾರೆ. ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ನಗರಸಭೆ, ಶಿಕ್ಷಣ ಇಲಾಖೆ, ವಕ್ಫ್‌ ಮಂಡಳಿ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆಗಳ ಭೂಮಿ ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಮಾತ್ರ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಒತ್ತುವರಿ ತೆರವಿಗೆ ಮುಂದಾದ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುವಷ್ಟು ಭೂಮಾಫಿಯಾ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎನ್ನಲಾಗುತ್ತಿದೆ.

ವಿಲಕ್ಷಣ ಘಟನೆಯೊಂದರಲ್ಲಿ ಮಹಾನಗರ ಪಾಲಿಕೆಯೇ ನಗರದ ಹೃದಯ ಭಾಗದಲ್ಲಿರುವ ಅಪ್ಪನ ಕೆರೆಯನ್ನೇ ಅಭಿವೃದ್ಧಿ ಕಾರ್ಯದ ನೆಪದಿಂದಾಗಿ ಒತ್ತುವರಿ ಮಾಡಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಆರೋಪ ಮಾಡಿದ್ದರು!

ಭೂ ಒತ್ತುವರಿ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಮಾಜಿ ಸಚಿವ ಎಸ್‌.ಕೆ. ಕಾಂತಾ ಅವರು ಕಲಬುರಗಿ ನಗರದಲ್ಲಿ ಕೆರೆ, ಪಾರ್ಕ್, ಸಾರ್ವಜನಿಕ ಜಾಗ ಸೇರಿದಂತೆ 160 ಎಕರೆ ಭೂಮಿ ಕಬಳಿಕೆಯಾಗಿದೆ ಎಂದು ಆರೋಪಿಸಿದ್ದರು. ಇಲ್ಲಿಯವರೆಗೂ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪೂರ್ಣಗೊಂಡಿಲ್ಲ ಎ‌ಂದು ಒಪ್ಪಿಕೊಳ್ಳುತ್ತಾರೆ ಪಾಲಿಕೆ ಅಧಿಕಾರಿಗಳು. ‌

ವಕ್ಫ್‌ ಆಸ್ತಿಗಳ ಅತಿಕ್ರಮಣ ತೆರವಿಗೆ ಹಿಂದಿನ ಪ್ರಾದೇಶಿಕ ಆಯುಕ್ತರಾಗಿದ್ದ ಸುಬೋಧ್‌ ಯಾದವ್‌ ಅವರಿಗೂ ಕಾಂತಾ ಅವರು ಮನವಿ ಸಲ್ಲಿಸಿದ್ದರು. ಯಾದವ್ ಅವರ ಸೂಚನೆ ಮೇರೆಗೆ ಪಾಲಿಕೆ ಆಯುಕ್ತರು 100 ಜನರಿಗೆ ನೋಟಿಸ್ ನೀಡಿದ್ದರು.

ನಗರದಲ್ಲಿ ವಕ್ಫ್ ಆಸ್ತಿ, ಸಾರ್ವಜನಿಕ ಉದ್ಯಾನಗಳ ಜಾಗಗಳು, ಬಡೇಪುರ ಕೆರೆ, ಫರಾನ್‌ ಸ್ಕೂಲ್‌, ಖಾಜಾ ಬಂದಾನವಾಜ್‌ ಕೆರೆ, ಸಾರ್ವಜನಿಕ ಉದ್ಯಾನ, ಹಲವು ಜಾಗಗಳನ್ನು ಒತ್ತುವರಿ ಮಾಡಲಾಗಿದೆ.

ಸ್ಮಶಾನ ಭೂಮಿಯೂ ಭೂಗಳ್ಳರ ಪಾಲು!

ಗ್ರಾಮದಲ್ಲಿ ದಲಿತರು ಸ್ಮಶಾನವಾಗಿ ಬಳಸುತ್ತಿದ್ದ ಭೂಮಿಯನ್ನೂ ಭೂಗಳ್ಳರು ಬಲವಂತವಾಗಿ ಒತ್ತುವರಿ ಮಾಡಿಕೊಂಡ ಪ್ರಕರಣಗಳು ಜಿಲ್ಲೆಯ ಅಫಜಲಪುರ ಹಾಗೂ ಆಳಂದ ತಾಲ್ಲೂಕಿನ ಹಲವೆಡೆ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆಯನ್ನೂ ದಾಖಲಿಸಿವೆ. ಇತ್ತೀಚೆಗೆ ಅಫಜಲಪುರ ತಾಲ್ಲೂಕಿನ ಗೊಬ್ಬುರ (ಬಿ) ಗ್ರಾಮದಲ್ಲಿ ದಲಿತರ ಬಳಕೆಗೆ ಇದ್ದ ಸ್ಮಶಾನ ಜಾಗ ತಮಗೆ ಸೇರಿದ್ದು ಎಂದು ಕೆಲವರು ವಾದಿಸಿ ಜೆಸಿಬಿ ಯಂತ್ರದಿಂದ 20 ಗುಂಟೆ ಜಾಗವನ್ನು ಜೆಸಿಬಿಯಿಂದ ನೆಲಸಮ ಮಾಡಿದ್ದರು. ಇದನ್ನು ಖಂಡಿಸಿ ಭೋವಿ ಸಮುದಾಯದವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದರು. ಸಚಿವರ ಸೂಚನೆಯಂತೆ ಭೂಮಾಪನ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಆ ಭೂಮಿ ಯಾರಿಗೆ ಸೇರಿದ್ದು ಎಂಬ ಬಗ್ಗೆ ಸರ್ವೆ ಮಾಡಿಸಲಾಗುತ್ತಿದೆ. ಆಳಂದ ತಾಲ್ಲೂಕಿನ ಕೋತನ ಹಿಪ್ಪರಗಾ ಗ್ರಾಮದಲ್ಲಿ 1.17 ಎಕರೆ ಜಮೀನು ದಲಿತರ ಸ್ಮಶಾನ ಭೂಮಿ ಎಂದು ದಾಖಲಾತಿಯಲ್ಲಿದ್ದರೂ ಅದನ್ನು ಬದಲಾವಣೆ ಮಾಡಲಾಗಿದೆ. ಮೊದಲಿನಂತೆಯೇ ಅದನ್ನು ಸ್ಮಶಾನಭೂಮಿಯಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಕಾರ್ಯಕರ್ತರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ್ದರು.

ನಾಗಾವಿ ಘಟಿಕಾ ಕೇಂದ್ರವೂ ಒತ್ತುವರಿ

10ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ದೊರೆ ಒಂದನೇ ಸೋಮೇಶ್ವರನ ದಂಡನಾಯಕ ಮಧುವರಸ ನಿರ್ಮಿಸಿರುವ ಚಿತ್ತಾಪುರ ತಾಲ್ಲೂಕಿನ ನಾಗಾವಿ ಹೊರವಲಯದ ಘಟಿಕಾ ಕೇಂದ್ರಕ್ಕೆ ಸೇರಿದ ಜಾಗವನ್ನು ವ್ಯಕ್ತಿಯೊಬ್ಬರು ಕಬಳಿಸಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸುಮಾರು ಅರ್ಧ ಎಕರೆ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸುವಂತೆ ನೋಟಿಸ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಬಗ್ಗೆ ಒತ್ತುವರಿದಾರರಿಗೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಯಾರು ಏನೆಂದರು.....?

ಪ್ರತಿ ವಾರ ಒತ್ತುವರಿ ಕುರಿತು ಸಭೆ

ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸುವುದು ನಿರಂತರ ಪ್ರಕ್ರಿಯೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳೊಂದಿಗೆ ಪ್ರತಿ ವಾರ ಸಭೆ ನಡೆಸಿ ಪ್ರಗತಿ ವಿವರವನ್ನು ಪಡೆಯಲಾಗುತ್ತದೆ. ಕಲಬುರಗಿಯ ಬಹಮನಿ ಕೋಟೆಯನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡವರನ್ನು ತೆರವುಗೊಳಿಸುವ ಬಗ್ಗೆ ಕಂದಾಯ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಒಂದು ವಾರದಲ್ಲಿ ಸಭೆ ನಡೆಸುತ್ತೇನೆ - ಫೌಜಿಯಾ ತರನ್ನುಮ್ ಬಿ. ಜಿಲ್ಲಾಧಿಕಾರಿ

ಗೂಡಂಗಡಿಗಳ ತೆರವು

ಕಲಬುರಗಿ ನಗರದ ಕೋರ್ಟ್‌ ರಸ್ತೆಯಲ್ಲಿ ಚರಂಡಿ ಮೇಲೆ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ಹಿಂದೆ ತೆರವುಗೊಳಿಸಲಾಗಿತ್ತು. ಇದೀಗ ಮತ್ತೆ ಅಲ್ಲಿ ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಲು ವಲಯಾಧಿಕಾರಿಗಳಿಗೆ ತಿಳಿಸಲಾಗಿದೆ. ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಯನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದ್ದು, ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಎಲ್ಲ ಮೂರು ವಲಯಗಳ ವಲಯಾಧಿಕಾರಿಗಳು ಒತ್ತುವರಿ ಪ್ರಕರಣಗಳ ಬಗ್ಗೆ ದೂರು ಬಂದ ಕೂಡಲೇ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ - ಭುವನೇಶ ಪಾಟೀಲ ಮಹಾನಗರ ಪಾಲಿಕೆ ಆಯುಕ್ತ

ಶಾಲೆಯ ಜಾಗ ಒತ್ತುವರಿ

ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯ ಸರ್ಕಾರಿ ಶಾಲೆಯ ಜಾಗವನ್ನು ವ್ಯಕ್ತಿಯೊಬ್ಬರು ಕಬಳಿಸಿ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಶಿಕ್ಷಣ ಇಲಾಖೆಗೆ ಸೇರಿದ ಜಾಗವು ಜಿಲ್ಲೆಯ ಹಲವೆಡೆ ಒತ್ತುವರಿಯಾಗಿದ್ದು, ಅವುಗಳನ್ನು ಮರಳಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ - ಸಕ್ರೆಪ್ಪಗೌಡ ಬಿರಾದಾರ, ಡಿಡಿಪಿಐ, ಕಲಬುರಗಿ

ಅಧಿಕಾರಿಗಳ ಉದಾಸೀನ

ಕಲಬುರಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜಮೀನ್ದಾರರು ಸರ್ಕಾರಿ ಗೋಮಾಳಗಳನ್ನು ಅತಿಕ್ರಮಿಸಿ ಬಾಳೆ ತೋಟ, ಕಬ್ಬಿನ ಹೊಲಗಳನ್ನು ಮಾಡಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಬರೀ ಕೆಳಹಂತದ ಅಧಿಕಾರಿಗಳಿಗೆ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಅಧಿಕಾರಿಗಳ ಉದಾಸೀನ ಧೋರಣೆಯೂ ಭೂಗಳ್ಳರಿಗೆ ವರವಾಗಿದೆ- ಅರ್ಜುನ್‌ ಭದ್ರೆ, ಹೋರಾಟಗಾರ

ಕಲಬುರಗಿಯ ಬಹಮನಿ ಕೋಟೆಯ ಮಹಾದ್ವಾರದ ಅಕ್ಕಪಕ್ಕದಲ್ಲಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವುದು
ಕಲಬುರಗಿಯ ಬಹಮನಿ ಕೋಟೆಯ ಮಹಾದ್ವಾರದ ಅಕ್ಕಪಕ್ಕದಲ್ಲಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT