ಕಾಳಗಿ: ತಾಲ್ಲೂಕಿನ ಮೋಘಾ ಗ್ರಾಮದಲ್ಲಿ ಗುರುವಾರ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಒಬ್ಬ ಯುವಕ ಹಾಗೂ ಬಾಲಕ ಸೇರಿಕೊಂಡು, ಇನ್ನೊಬ್ಬ ಯುವಕನನ್ನು ಕೊಲೆ ಮಾಡಿದ್ದಾರೆ.
ಮೋಘಾ ಗ್ರಾಮದ ಜಗನ್ನಾಥ ಭೀಮರಾಯ ಚಿಂತಕುಂಟಾ (22) ಕೊಲೆಗೀಡಾದ ಯುವಕ. ಇದೇ ಗ್ರಾಮದ ಮಾಣಿಕ ತುಕಾರಾಮ ಮಾಳಗಿ (25) ಹಾಗೂ 17 ವರ್ಷದ ಒಬ್ಬ ಬಾಲಕ ಆರೋಪಿಗಳು.
ಜೂಸ್ ಕುಡಿಯುವ ನೆಪ ಮಾಡಿಕೊಂಡು ಜಗನ್ನಾಥನನ್ನು ಗ್ರಾಮದ ಹೊರಗೆ ಕರೆದುಕೊಂಡು ಹೋದ ಆರೋಪಿಗಳು ಹಗ್ಗದಿಂದ ಬಿಗಿದು, ಎದೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಾಣಿಕನನ್ನು ಬಂಧಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ.