ಕಲಬುರ್ಗಿ: ತಾಲ್ಲೂಕಿನ ನಂದೂರ (ಕೆ) ಗ್ರಾಮದಲ್ಲಿ ಅಶ್ವಿನಿ ರಾಜಕುಮಾರ ಸಂಗಪಾಲ (27) ಎಂಬ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಪೋಷಕರು ದೂರು ದಾಖಲಿಸಿದ್ದಾರೆ.
ತಾಲ್ಲೂಕಿನ ಕಡಬೂರ ಗ್ರಾಮದ ಅಶ್ವಿನಿ ಅವರನ್ನು ನಗರದ ಶಹಾಬಾದ್ ರಸ್ತೆಯ ನಂದೂರ (ಕೆ) ಗ್ರಾಮದಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ರಾಜಕುಮಾರಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಮಗುವಿದೆ.
ಪತಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ಮಹಿಳೆ ಭಾನುವಾರ ರಾತ್ರಿ ಜಗಳವಾಡಿದ್ದಾರೆ. ಸೋಮವಾರ ಬೆಳಿಗೆ ಅಡುಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಪತಿ ಕೊಲೆ ಮಾಡಿರಬಹುದು ಎಂದು ಆಕೆಯ ಪೋಷಕರು ದೂರು ನೀಡಿದ್ದಾರೆ.
ಎಸಿಪಿ ಜೆ.ಎಚ್.ಇನಾಮದಾರ, ವಿಶ್ವವಿದ್ಯಾಲಯ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಿವಾನಂದ ಗಾಣಿಗೇರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು.