ಶಹಾಬಾದ್: ತಾಲ್ಲೂಕಿನ ತೊನಸನಳ್ಳಿ (ಎಸ್) ಗ್ರಾಮ ಪಂಚಾಯಿತಿ ಕಚೇರಿಯ ಮೇಲೆ ಶುಕ್ರವಾರ ಬಣ್ಣ ಮಾಸಿದ, ಹರಿದ ರಾಷ್ಟ್ರದ್ವಜ ಹಾರಿಸಲಾಗಿದೆ.
ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯ ಮೇಲೆ ಬೆಳಿಗ್ಗೆ ರಾಷ್ಟ್ರ ದ್ವಜಾರೋಹಣ ನಡೆಸಿ, ಸಂಜೆ ಅವರೋಹಣ ಮಾಡಬೇಕೆಂಬ ನಿಯಮವಿದೆ. ಅದರಂತೆ, ಗ್ರಾಮ ಪಂಚಾಯಿತಿ ಕಚೇರಿಯ ಮೇಲೆ ಅಧ್ಯಕ್ಷ, ಪಿಡಿಒ ಅವರು ಬಣ್ಣ ಮಾಸಿ, ಹರಿದ ದ್ವಜವನ್ನೇ ಹಾರಿಸುವ ಮೂಲಕ, ‘ಧ್ವಜ ಸಂಹಿತೆ’ ಉಲ್ಲಂಘಿಸಿದ್ದಾರೆ.
ಶಾಸಕ ಬಸವರಾಜ ಮತ್ತಿಮುಡ ಅವರು ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹರಿದ ಧ್ವಜ ಶಾಸಕರ ಗಮನಕ್ಕೆ ಬಂತು. ಕೂಡಲೇ ಇದನ್ನು ತಹಶೀಲ್ದಾರ್ ಸುರೇಶ ವರ್ಮಾ, ತಾಲ್ಲೂಕು ಪಂಚಾಯಿತಿ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಗಮನಕ್ಕೆ, ಪಿಎಸ್ಐ ಮಹಾಂತೇಶ ಪಾಟೀಲ ಅವರ ಗಮನಕ್ಕೆ ತರಲಾಯಿತು.
ಇದನ್ನು ಗಮನಿಸಿದ ತಹಶೀಲ್ದಾರ್, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.
ಮತ್ತೊಂದು ಯಡವಟ್ಟು: ಶಾಸಕರ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಧ್ವಜವನ್ನು ಮಧ್ಯಾಹ್ನವೇ ಇಳಿಸಿದರು. ಮತ್ತೆ ಹೊಸ ಧ್ವಜವನ್ನು ಮಧ್ಯಾಹ್ನವೇ ಆರೋಹಣ ಮಾಡಿ, ಸಂಜೆ ಅವರೋಹಣ ಮಾಡಿದರು. ಇದರಿಂದಾಗಿ ಒಂದೇ ದಿನ ಎರಡು ಬಾರಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಮತ್ತೊಮ್ಮ ಧ್ವಜ ಸಂಹಿತೆ ಉಲ್ಲಂಘಿಸಿದರು.