ಕಲಬುರ್ಗಿ: ‘ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವಿಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಹೇಳಿದರು.
ನಗರದ ಅಂಬಾರಾಯ ಅಷ್ಠಗಿ ಅವರ ಮನೆಯಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಗಳ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ನಾಡಿನ ಅಂಧ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿರುವ ಪಂ.ಪುಟ್ಟರಾಜ ಗವಾಯಿಗಳು ಲಕ್ಷಾಂತರ ಮಕ್ಕಳಿಗೆ ಬದುಕು ಹಾಗೂ ಬೆಳಕು ನೀಡಿದ್ದಾರೆ. ಇವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ. ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣ ಕೊಡಿಸಿದರೆ ಸಾಲದು. ಗುರು–ಹಿರಿಯರ ಜತೆ ನಡೆದುಕೊಳ್ಳುವ ರೀತಿ, ಮನೆಗೆ ಬಂದವರನ್ನು ಸತ್ಕರಿಸುವ ಪದ್ದತಿಗಳನ್ನು ತಿಳಿಹೇಳುವುದರ ಜೊತೆಗೆ ಮಾನವಿಯ ಮೌಲ್ಯಗಳನ್ನು ಬೆಳೆಸಬೇಕು’ ಎಂದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಮಾತನಾಡಿ, ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳಿಗೆ ಕಣ್ಣಿರದಿದ್ದರೂ ಸಂಗೀತನಾದದಿಂದ ಎಲ್ಲರ ಮನಸನ್ನು ತೃಪ್ತಿಪಡಿಸಿದರು. ತಮ್ಮ ಸಂಗೀತದಿಂದ ಜ್ಞಾನಸುಧೆ ಹರಡಿಸಿದ್ದುಈಗ ಇತಿಹಾಸ. ಅದರಂತೆಯೆ ಹಿರಿಯ ಶ್ರೀಗಳ ಪರಂಪರೆಯನ್ನು ಕಲ್ಲಯ್ಯಜ್ಜ ನಾಡಿನ ಅಂಧ ಹಾಗೂ ಬಡ ಮಕ್ಕಳ ಬದುಕಿಗೆ ದಾರಿದೀಪವಾಗುತ್ತಿರುವುದು ನಾಡಿನ ಜನತೆಯ ಸೌಭಾಗ್ಯ ಎಂದು ಬಣ್ಣಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಶಾಸಕ ಅಮರನಾಥ ಪಾಟೀಲ ಮಹಾಗಾಂವ, ಬಿಜೆಪಿ ನಾಯಕಿ ಜಯಶ್ರೀ ಮತ್ತಿಮೂಡ, ರವಿ ಬಿರಾದಾರ, ಸಂಗಮೇಶ ನಾಗನಳ್ಳಿ, ಶರಣಬಸಪ್ಪ ಪಾಟೀಲ್ ಅಷ್ಠಗಿ, ರಾಜಕುಮಾರ್ ಕೋಟೆ, ಶಿವಕುಮಾರ್ ಪಸಾರ, ವಿಜಯಕುಮಾರ್ ತೇಗಲತಿಪ್ಪಿ ಇದ್ದರು.