ಸೇಡಂ: ‘ಸಮಾಜದಲ್ಲಿ ವಿವಿಧ ಧರ್ಮ ಹಾಗೂ ಸಮಾಜದವರು ತಮ್ಮದೇ ಆದ ಸಂಪ್ರದಾಯ, ಪದ್ಧತಿಯಂತೆ ಹಬ್ಬಗಳನ್ನು ಆಚರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಯಾರೇ ಆಗಲಿ ಶಾಂತಿ ಕದಡಿಸುವ ದುಸ್ಸಾಹಸಕ್ಕೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಪಿಐ ಶಂಕರಗೌಡ ಪಾಟೀಲ ಎಚ್ಚರಿಸಿದರು
ಈದ್ ಮಿಲಾದ್ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಆಯೋಜಿಸಿದ್ಧ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರತಿಯೊಂದು ಹಬ್ಬಕ್ಕೆ ತನ್ನದೇ ಆದ ಇತಿಹಾಸ ಮತ್ತು ಮಹತ್ವ ಇದೆ. ಹಬ್ಬಗಳನ್ನು ಅರ್ಥೈಸಿಕೊಂಡು ಆಚರಿಸಿದರೆ ಸಮಾಜದಲ್ಲಿ ಸಂಭ್ರಮ ಹೆಚ್ಚುತ್ತದೆ, ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಬ್ಬಗಳ ಆಚರಣೆಯಾಗಲಿ’ ಎಂದರು.
ತಹಶೀಲ್ದಾರ್ ಬಸವರಾಜ ಬೆಣ್ಣೆ ಶಿರೂರ್ ಮಾತನಾಡಿ, ‘ಎಲ್ಲರೂ ಬೆರೆತು ಪ್ರೀತಿಯಿಂದ ಹಬ್ಬವನ್ನು ಆಚರಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಕಾನೂನಿನ ಚೌಕಟ್ಟಿನೊಳಗೆ ಸೂಕ್ತ ರೀತಿಯಲ್ಲಿ ಹಬ್ಬ ಆಚರಿಸಬೇಕು’ ಎಂದು ತಿಳಿಸಿದರು.