ಕಲಬುರ್ಗಿ: ನಗರದ ವಿವಿಧೆಡೆ ಹುಬ್ಬಳ್ಳಿ–ಧಾರವಾಡದಿಂದ ಬಂದಿದ್ದ ತಂಡದವರು ಒಟ್ಟು 945 ಬೀದಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಿದರು ಎಂದು ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದ್ದಾರೆ.
ಹದಿನಾರು ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡವು ನಗರದ ಕೇಂದ್ರ ಬಸ್ ನಿಲ್ದಾಣ, ಕಣ್ಣಿ ತರಕಾರಿ ಮಾರ್ಕೆಟ್, ಎಂಎಸ್ಕೆ ಮಿಲ್, ಜಿಲಾನಾಬಾದ್, ಮಹ್ಮದಿ ಚೌಕ್, ಮೌಲಾಲಿ ಕಟ್ಟಾ, ಮಿಸ್ಬಾ ನಗರ, ಹೀರಾಪುರ ವೃತ್ತ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿರುವ ಬೀದಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ.
ತಂಡವು ಜಿಮ್ಸ್ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿದಾಗ ಹಂದಿಗಳು ಕಂಡು ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿಯೂ ಈ ತರಹದ ಕಾರ್ಯಕ್ರ ರೂಪಿಸಿ ನಗರದಲ್ಲಿ ಹಂದಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪಾಲಿಕೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಮಹ್ಮದ್ ಸಖಾವತ ಹುಸೇನ್, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಹಣಮಂತ ಹಬ್ಶಿಯಾಳ, ನೈರ್ಮಲ್ಯ ನಿರೀಕ್ಷಕ ನಾಗರಾಜ, ಬಸವರಾಜ ಪಾಣೆಗಾಂವ ಇದ್ದರು.