ನಾಲವಾರ(ವಾಡಿ): ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದ 300 ಜನ ಕೂಲಿ ಕಾರ್ಮಿಕರ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ವತಿಯಿಂದ ಸೋಮವಾರ ನಾಲವಾರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕಳೆದ ವರ್ಷ ಕೆಲಸ ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸಿದ್ದೇವೆ. ಆದರೆ ನಮ್ಮ ಕೂಲಿ ಹಣ ನೀಡದೇ ಸುಳ್ಳು ಜವಾಬು ಹೇಳುತ್ತಾ ಸತಾಯಿಸುತ್ತಿದ್ದಾರೆ ಎಂದು ಕೂಲಿ ಕಾರ್ಮಿಕರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಕಲ್ಬುರ್ಗಿ ಜಿಲ್ಲಾ ಕಾರ್ಯದರ್ಶಿ ಡಾ.ಸಾಯಬಣ್ಣ ಗುಡುಬಾ ’ಕಳೆದ ವರ್ಷ ಗ್ರೇಡ್-2 ಕಾರ್ಯದರ್ಶಿ ರಾಚಯ್ಯಾಸ್ವಾಮಿ ಅವರು ಪಿಡಿಓ ಆಗಿ ಕೆಲಸ ಮಾಡಿದ ಅವಧಿಯಲ್ಲಿ ಸುಮಾರು 300 ಜನ ಕೂಲಿ ಕಾರ್ಮಿಕರ ಎನ್.ಎಮ್.ಆರ್. ಶೂನ್ಯ ಮಾಡಲಾಗಿದೆ. ಹೀಗಾಗಿ ದುಡಿದ ಹಣ ಕಾರ್ಮಿಕರ ಕೈ ಸೇರದೆ ಗೋಳಾಟ ನಡೆದಿದೆ. ಬಾಕಿ ವೇತನ ಬಿಡುಗಡೆ ಮಾಡುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ನರೇಗಾ ತಾ ಲ್ಲೂಕು ಸಹಾಯಕ ನಿರ್ದೇಶಕ ಪಂಡಿತ ಶಿಂಧೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಮೌನೇಶ ಮಳಬಾ, ಸದಸ್ಯರಾದ ಸಾಬಮ್ಮ ಎಮ್.ಕಾಳಗಿ, ಗಿಡ್ಡಮ್ಮ ಪವಾರ, ತೊಟಮ್ಮ, ಕವಿತಾ ಸುಗ್ಗಾ, ಹಣಮಂತ ಮಳಬಾ ಸಹಿತ ಹಲವರು ಭಾಗವಹಿಸಿದ್ದರು.