ಚಿಂಚೋಳಿ: ಪರಿಶಿಷ್ಟ ಪಂಗಡದ ಗೊಂಡ ಜಾತಿ ಪ್ರಮಾಣ ಪತ್ರ ಪಡೆಯಬೇಕಾದರೆ ನಾಗರಿಕ ಹಕ್ಕು ಜಾರಿ ನಿರ್ದೆಶನಾಲಯದ ವರದಿ ಕಡ್ಡಾಯಗೊಳಿಸಿ 2021ರ ಆಗಸ್ಟ್31ರಂದು ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಆಧೀನ ಕಾರ್ಯದರ್ಶಿ ರಾಜಶ್ರೀ ಎಚ್. ಕುಲಕರ್ಣಿ ಅವರು ಹೊರಡಿಸಿರುವ ಆದೇಶ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಗೊಂಡ ಸಂಘರ್ಷ ಸಮಿತಿ ಕಾರ್ಯಕರ್ತರು ತಾಲ್ಲೂಕು ಆಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಸರ್ಕಾರದ ಆದೇಶದಿಂದ ಗೊಂಡ ಜಾತಿ ಪ್ರಮಾಣ ಪತ್ರ ಪಡೆದು ಈಗಾಗಲೇ ಸರ್ಕಾರಿ ನೌಕರಿ, ವೃತ್ತಿ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪ್ರವೇಶ ಪಡೆದವರಿಗೆ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ತೊಂದರೆಯಾಗುತ್ತಿದೆ. ಅಧಿಕಾರಿಗಳ ಈ ಆದೇಶದ ಹಿಂದೆ ಸಚಿವ ಶ್ರೀರಾಮುಲು ಅವರ ಕುಮ್ಮಕ್ಕು ಇದೆ ಎಂದು ಗೊಂಡಸಂಘರ್ಷ ಸಮಿತಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಅಣಕಲ್ ಆರೋಪಿಸಿದರು.
ಸರ್ಕಾರ ತಕ್ಷಣ ಈ ಆದೇಶ ವಾಪಸ್ ಪಡೆದು ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳ ಹಾಗೂ ನೌಕರರ ಹಿತ ಕಾಯಲು ಮುಂದಾಗಬೇಕು ಎಂದು ಅಧ್ಯಕ್ಷ ಹಣಮಂತ ಪೂಜಾರಿ ಒತ್ತಾಯಿಸಿದರು.