ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 16ರಂದು ಅಂಗನವಾಡಿ ನೌಕರರ ಪ್ರತಿಭಟನೆ

ವೇತನ ಪರಿಷ್ಕರಣೆ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Last Updated 2 ಆಗಸ್ಟ್ 2021, 15:42 IST
ಅಕ್ಷರ ಗಾತ್ರ

ಕಲಬುರ್ಗಿ: ’ಅಂಗನವಾಡಿ ನೌಕರರ ವೇತನ ಪರಿಷ್ಕರಣೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸ್ತಾವ ಸಲ್ಲಿಸಿದ ₹ 339.48 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್‌ 16ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.

’ಸೇವಾ ಬಡ್ತಿ ವೇತನಕ್ಕೆ ₹ 153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ನೌಕರರ ವೇತನಕ್ಕೆ ₹ 6.99 ಕೋಟಿ, ಸಹಾಯಕಿಯರಿಗೆ ಉಂಟಾಗುತ್ತಿರುವ ಸಂಬಳದ ವ್ಯತ್ಯಾಸ ಸರಿಪಡಿಸಲು ₹ 131.42 ಕೋಟಿ, ನಿವೃತ್ತಿ ಸೌಲಭ್ಯಗಳಿಗೆ ₹ 47.82 ಕೋಟಿ ಅನುದಾನ ಬೇಕು ಎಂದು ಇಲಾಖೆ ಈಗಾಗಲೇ ಪ್ರಸ್ತಾವ ಸಲ್ಲಿಸಿದೆ. ಇದರಿಂದ 1.30 ಲಕ್ಷ ಅಂಗನವಾಡಿ ನೌಕರರಿಗೆ ಸಹಾಯವಾಗಲಿದೆ. ಆದರೂ ರಾಜ್ಯ ಸರ್ಕಾರ ಮನಸ್ಸು ಮಾಡಿಲ್ಲ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಂಗನವಾಡಿ ಮಕ್ಕಳಿಗೆ ನೀಡಲಾಗುವು ಕೋಳಿಮೊಟ್ಟೆ ಅನುದಾನದಲ್ಲಿ ಸ್ವತಃ ಸಚಿವರೇ ಬ್ರಷ್ಟಾಚಾರ ಮಾಡಿದ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಬೇಕು. ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಜತೆಗೇ ಮೊಟ್ಟೆಯನ್ನೂ ನೀಡಬೇಕು. ಪಾಲಕರಿಗೆ ಹಣ ನೀಡಿದರೆ ಅದು ಪೌಷ್ಟಿಕಾಂಶ ಕೊಂಡುಕೊಳ್ಳಲು ಬಳಕೆಯಾಗುವುದಿಲ್ಲ’ ಎಂದರು.

‘ರಾಜ್ಯದಲ್ಲಿ ಕೊರೊನಾ ಕೆಲಸದ ಒತ್ತಡದಿಂದ 35 ಸಿಬ್ಬಂದಿ ಸಾವನ್ನಪ್ಪಿದ್ದು, ತಲಾ ₹ 1 ಲಕ್ಷ ಪರಿಹಾರ ನೀಡಬೇಕು. ಕೋವಿಡ್‌ನಿಂದ 29 ನೌಕರರು ನಿಧನ ಹೊಂದಿದ್ದಾರೆ. ಇದರಲ್ಲಿ ಹಲವರಿಗೆ ಇನ್ನೂ ವಿಮೆ ಹಣ ಬಂದಿಲ್ಲ. ಸರ್ಕಾರ ಕೂಡಲೇ ವಿಮೆ ಮಂಜೂರು ಮಾಡಬೇಕು. ಅನುಕಂಪದ ಆಧಾರದಲ್ಲಿ ಕೆಲಸ ಕೊಡಲು ’ಮಗಳು‘ ಎಂದು ಪರಿಗಣಿಸದೇ ಕುಟುಂಬದಲ್ಲಿ ಒಬ್ಬರು ಎಂದು ಪರಿಗಣಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು. ಐಸಿಡಿಎಸ್‌ ಕೆಲಸ ಹೊರತುಪಡಿಸಿ ಉಳಿದ ಕೆಲಸಗಳನ್ನು ನಿರ್ಬಂಧಿಸಿ, ಒತ್ತಡ ಕಡಿಮೆ ಮಾಡಬೇಕು’ ಎಂದೂ ವರಲಕ್ಷ್ಮಿ ಆಗ್ರಹಿಸಿದರು.

‘2016ರಿಂದ ಬಾಕಿ ಇರುವ ಇಡುಗಂಟು ನೀಡಬೇಕು. ಕಾರ್ಯಕರ್ತೆಯರಿಗೆ ₹ 30 ಸಾವಿರ, ಸಹಾಯಕಿಯರಿಗೆ ₹ 21ಸಾವಿರ ಸಂಬಳ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೂ ಸಹಾಯಕಿಯರನ್ನು ನೀಡಬೇಕು. ಸದ್ಯ ಇರುವ ಸಂಬಳವನ್ನಾದರೂ ಪ್ರತಿ ತಿಂಗಳು ಕೊಡಬೇಕು’ ಎಂದು ಕೋರಿದರು.

ಮುಖಂಡರಾದ ಎಚ್‌.ಎಸ್‌. ಸುನಂದಾ, ಶಾಂತಾ ಗಂಟೆ, ಗೌರಮ್ಮ ಪಾಟೀಲ ಇದ್ದರು.

‘ಬಿಸಿಯೂಟ ನೌಕರರಿಗೆ ಸಂಬಳ ನೀಡಿ’
‘ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೌಕರರಿಗೆ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದ ಅವರ ಕುಟುಂಬಗಳು ಬೀದಿಗೆ ಇದ್ದಿವೆ. ಇದನ್ನೂ ಖಂಡಿಸಿ ಆ. 16ರಂದು ಪ್ರತಿಭಟನೆ ನಡೆಸಲಾಗುವುದು’ ಎಂದುಎಸ್.ವರಲಕ್ಷ್ಮಿ ತಿಳಿಸಿದರು.

‘ಕೊರೊನಾದಿಂದ ಮೃತಪಟ್ಟ ಬಿಸಿಯೂಟ ನೌಕರರ ಕುಟುಂಬದವರಿಗೆ ಕೆಲಸ ಹಾಗೂ ಪರಿಹಾರ ನೀಡಬೇಕು. ಎಲ್‍ಐಸಿ ಆಧರಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಬಾರದು. ಬಿಸಿಯೂಟ ಯೋಜನೆ ಬಲಪಡಿಸಬೇಕು ಮತ್ತು ಕಳೆದ ವರ್ಷ ಬಜೆಟ್‍ನಲ್ಲಿ ಕಡಿತಗೊಂಡಿರುವ ಮೊತ್ತ ಮರಳಿ ನೀಡಬೇಕು. ಬಿಸಿಯೂಟ ಜತೆಗೆ ಶಾಲಾ ಆವರಣದಲ್ಲಿ ಕೈತೋಟ ಮಾಡಲು ನರೇಗಾ ಅಡಿಯಲ್ಲಿ ಕೆಲಸ ನೀಡಬೇಕು’ ಎಂದೂಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT