ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರದಾಳ ಗ್ರಾಮದಲ್ಲಿ ಅತ್ಯಧಿಕ ಮಳೆ

ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ರೋಹಿಣಿ; ರೈತರ ಮೊಗದಲ್ಲಿ ಹರ್ಷ
Last Updated 3 ಜೂನ್ 2020, 10:45 IST
ಅಕ್ಷರ ಗಾತ್ರ

ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯ ಚಿತ್ತಾಪುರ, ಶಹಾಬಾದ್‌, ಚಿಂಚೋಳಿ, ಕಾಳಗಿ, ಸೇಡಂ, ಅಫಜಲಪುರ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಗಿದ್ದು, ಚಿತ್ತಾಪುರ ತಾಲ್ಲೂಕಿನ ಕರದಾಳದಲ್ಲಿ ಅತ್ಯಧಿಕ 72 ಮಿ.ಮೀ. ಮಳೆ ಸುರಿದಿದೆ.

ಅಳ್ಳೊಳ್ಳಿ ಹಾಗೂ ಗುಂಡೂರಿನಲ್ಲಿ 64 ಮಿಲಿ ಮೀಟರ್‌ ಮಳೆ ಸುರಿದಿದೆ. ಶಹಾಬಾದ್ ಬಳಿಯ ಭಂಕೂರು ಹಾಗೂ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ತಲಾ 62 ಮಿ.ಮೀ. ಮಳೆಯಾಗಿದೆ.

ಕಳೆದ ಎರಡು–ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ರೈತರು ರೋಹಿಣಿ ಮಳೆಗೆ ಹರ್ಷಚಿತ್ತರಾಗಿದ್ದು, ಬಿತ್ತನೆಗಾಗಿ ಹೊಲಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಕೃಷಿ ಹೊಂಡಗಳಲ್ಲಿಯೂ ನೀರು ತುಂಬಿಕೊಳ್ಳುತ್ತಿದೆ.

ಬಿರುಗಾಳಿ

ಕಾಳಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಬೆಳಗಿನ ಜಾವ ಬಿರುಗಾಳಿ ಬೀಸಿದ್ದಲ್ಲದೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಉತ್ತಮ ಮಳೆ ಸುರಿದಿದೆ. ಇದರಿಂದ ಮಧ್ಯರಾತ್ರಿ ಕೈಕೊಟ್ಟ ವಿದ್ಯತ್‌ ಮಂಗಳವಾರ ಕಣ್ಣುಮುಚ್ಚಾಲೆ ಆಟ ನಡೆಸಿತ್ತು. ಇಳೆ ತಣ್ಣಗಾಗಿ ಇಡೀ ದಿನ ತಂಪು ವಾತಾವರಣ ಇತ್ತು.

ಕಮಲಾಪುರದ‌ಲ್ಲೂ ತುಂತುರು ಮಳೆ: ತಾಲ್ಲೂಕಿನ ವಿವಿಧೆಡೆ ಸೋಮವಾರ ಬೆಳಗಿನ ಜಾವ ಸ್ವಲ್ಪ ಮಳೆಯಾಗಿದೆ. ಭೂಮಿಯಲ್ಲಿ ಅಲ್ಪ ಪ್ರಮಾಣದ ತೇವಾಂಶ ಕಂಡು ಬಂದಿದೆ, ಬಿತ್ತನೆಗೆ ಯೋಗ್ಯವಾಗಿಲ್ಲ. ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಇರುವುದರಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ರೈತರು ಬೀಜ, ಗೊಬ್ಬರ ಖರೀದಿಗೆ ಪಟ್ಟಣಕ್ಕೆ ಆಗಮಿಸಿರುವುದು ಕಂಡು ಬಂತು.

ಚಿತ್ತಾಪುರ ರೈತರ ಮೊಗದಲ್ಲಿ ಸಂತಸ: ತಾಲ್ಲೂಕಿನಲ್ಲಿ ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ಹಾಗೂ ಕಾದು ಕೆಂಡವಾಗಿದ್ದ ಇಳೆಗೆ ಸೋಮವಾರ ಮಳೆರಾಯ ತಂಪನ್ನೆರೆದ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅಗತ್ಯವಾಗಿದ್ದ ಮಳೆ ಬಂದಿದ್ದರಿಂದ ರೈತರ ಮೊಗದಲ್ಲಿ ಸಂತೋಷದ ಕಳೆ ಮೂಡಿದೆ. ಮಧ್ಯರಾತ್ರಿ 11.30 ಕ್ಕೆ ಶುರುವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT