ಯಡ್ರಾಮಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕಾಖಂಡಕಿ ಗ್ರಾಮದಲ್ಲಿ ಮಳೆಯಿಂದ ಕೆಸರು ಗದ್ದೆಯಂತಾದ ಜಮೀನಿನಲ್ಲೇ ಭಕ್ತರು ಮಲ್ಲಾರಾಧ್ಯ ಕೋರಿಸಿದ್ದೇಶ್ವರ ರಥವನ್ನು ಎಳೆದರು.
ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ 6ಕ್ಕೆ ಜರುಗಬೇಕ್ಕಿದ್ದ ರಥೋತ್ಸವ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ರಾತ್ರಿ 10ಕ್ಕೆ ನಿಗದಿಯಾಯಿತು. ಮಳೆ ನೀರಿನಿಂದಾಗಿ ರಥ ಸಾಗುವ ಜಮೀನಿನ ಮಾರ್ಗವು ಕೆಸರು ಗದ್ದೆಯಂತೆ ಆಗಿತ್ತು. ಮೊಣಕಾಲುದ್ದ ನಿಂತ ನೀರು ಮತ್ತು ಜಿಟಿಜಿಟಿಯಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ನೂರಾರು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.
ನಾಲವಾರ ಹಾಗೂ ಕಾಖಂಡಕಿ ಮಠಗಳ ಪೀಠಾಧಿಪತಿ ಸಿದ್ಧತೋಟೇಂದ್ರ ಶಿವಾಚಾರ್ಯ ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು. ಬಾದಾಮಿ ಅಮಾವಾಸ್ಯೆ ದಿನದ ಬೆಳಿಗ್ಗೆ ಸಾವಿರಾರು ಭಕ್ತರು ತನಾರತಿ ಉತ್ಸವದಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು.
ಮಠದ ಭಕ್ತರಾದ ಶಿವಲಿಂಗ ಭೀಮನಳ್ಳಿ, ಗೋಪು ರಾಠೋಡ ಮತ್ತು ಡಾ.ಸುದೀಪ ಯಡ್ರಾಮಿ ಅವರಿಂದ ಶಿವಾಚಾರ್ಯರ ನಾಣ್ಯಗಳ ತುಲಾಭಾರ ಸೇವೆ ಜರುಗಿತು.
ಜಾತ್ರೆಯ ಅಂಗವಾಗಿ ಕಳೆದ ಒಂದು ವಾರದಿಂದ ಸೂರ್ಯಕಾಂತ ಶಾಸ್ತ್ರಿ ಅವರು ಪುರಾಣ ಪ್ರವಚನ ನಡೆಸಿಕೊಟ್ಟರು. ರಾಜಶೇಖರ ಹುಲ್ಲೂರ ಮತ್ತು ಮಹಾಂತೇಶ ಹುಲ್ಲೂರ ಅವರು ಸಂಗೀತ ಸೇವೆ ನೀಡಿದರು.
ಮುಖಂಡರಾದ ಅಶೋಕ ಸಾಹು ಗೋಗಿ, ಮಲ್ಲಿನಾಥ ಪಾಸೋಡಿ, ಶಿವರೆಡ್ಡಿಗೌಡ ಶಿರಾ, ಸಿದ್ದಣ್ಣಗೌಡ ಗುಳ್ಯಾಳ, ನಿಂಗಯ್ಯ ಗುತ್ತೇದಾರ, ಗುಂಡು ತಿಪ್ಪಣ್ಣ ರಾಠೋಡ, ಮಲ್ಲಪ್ಪ ಪಾಸೋಡಿ, ಅರ್ಚಕರಾದ ಸಂಗು ಗದ್ದಿಗಿ ಹಾಗೂ ಹಣಮಂತ ಕಟ್ಟಿಮನಿ ಉಪಸ್ಥಿತರಿದ್ದರು.