ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಸುರೇಶ್ ರೈನಾ ಅವರು ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಮೀನಖಂಡ ನೋವಿನಿಂದ ಬಳಲುತ್ತಿರುವ ಅವರು ಮಂಗಳವಾರ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಆದ್ದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಸಿಎಸ್ಕೆ ತಿಳಿಸಿದೆ.
ಈಗಾಗಲೇ ತೊಡೆ ಸ್ನಾಯು ನೋವಿಗೆ ಒಳಗಾಗಿರುವ ತಂಡದ ಕೇದಾರ್ ಜಾಧವ್, ಟೂರ್ನಿಯ ಎಲ್ಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ತನ್ನ ಆಟಗಾರರರ ಗಾಯದ ಸಮಸ್ಯೆಯು ಸಿಎಸ್ಕೆಗೆ ತಲೆನೋವಾಗಿ ಪರಿಣಮಿಸಿದೆ.
ತಂಡದ ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ ಅವರು ಪಕ್ಕೆಲಬು ನೋವಿನಿಂದ ಹಾಗೂ ಫಫ್ ಡು ಪ್ಲೆಸಿಸ್ ಸ್ನಾಯುಸೆಳೆತ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್ಕೆಯ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ತಿಳಿಸಿದ್ದಾರೆ.
ಇದೇ 15ರಂದು ನಡೆಯುವ ಪಂದ್ಯದಲ್ಲಿ ಸಿಎಸ್ಕೆಯು ಕಿಂಗ್ಸ್ ಇಲೆವನ್ ಪಂಜಾಬ್ ತಂಡದೊಂದಿಗೆ ಸೆಣಸಲಿದೆ.