ಸೇಡಂ(ಕಲಬುರಗಿ): ತಾಲ್ಲೂಕಿನ ಮಳಖೇಡ ಸೇತುವೆ ಮೇಲಿಂದ ಕಾಗಿಣಾ ನದಿ ನೀರು ಇಳಿಮುಖವಾಗಿದ್ದರಿಂದ ಮಳಖೇಡ ಸೇತುವೆ ಮೇಲೆ ವಾಹನ ಸಂಚಾರ ಬುಧವಾರ ಆರಂಭಗೊಂಡಿದೆ.
ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಮಂಗಳವಾರ ಸೇತುವೆ ಮೇಲೆ ನೀರು ಹರಿದಿದ್ದರಿಂದ ರಾಜ್ಯ ಹೆದ್ದಾರಿ 10 ಸೇಡಂ-ಕಲಬುರಗಿ ಸಂಚಾರ ಸ್ಥಗಿತಗೊಂಡಿತ್ತು. ರಾತ್ರಿಯಿಡಿ ಕೆಲ ವಾಹನಗಳು ಮಳಖೇಡದಲ್ಲಿ ಉಳಿದರೆ, ಕೆಲವು ವಾಹನಗಳು ಚಿತ್ತಾಪುರ, ಶಹಬಾದ್ ಮೇಲಿಂದ ತೆರಳಿದ್ದವು. ಬುಧವಾರ ಬೆಳಿಗ್ಗೆಯಿಂದ ವಾಹನ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಸಂಚಾರ ಮುಕ್ತವಾಗಿದೆ.
ಹೊಲಗಳಿಗೆ ನುಗ್ಗಿದ ನೀರು:ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ನದಿ ದಂಡೆಗಳ ಸಂಗಾವಿ (ಎಂ), ಬಿಬ್ಬಳ್ಳಿ ಕಾಚೂರ, ಯಡಗಾ, ಹಾಬಾಳ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿದೆ.
ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಪ್ರವಾಹ ಕಡಿಮೆಯಾಗಿದ್ದರಿಂದ ಸೇತುವೆ ಮೇಲಿನ ಸಾರಿಗೆ ಸಂಚಾರ ಬುಧವಾರ ಬೆಳಗ್ಗೆ ಯಥಾರೀತಿ ಶುರುವಾಗಿದೆ. ಬಸ್, ಲಾರಿ, ಇತರೆ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ.