ಕಲಬುರ್ಗಿ: ಕೊರೊನಾ ವೈರಾಣುವಿನ ಭೀತಿಯಿಂದ ನಗರದ ಎಲ್ಲ ದೇವಸ್ಥಾನಗಳ ಬಾಗಿಲುಗಳು ಮುಚ್ಚಿದ್ದರಿಂದ, ಭಕ್ತರು ಸೋಮವಾರ ದೂರದಿಂದಲೇ ನಮಿಸಿ ಶ್ರಾವಣ ಮಾಸವನ್ನು ಆರಂಭಿಸಿದರು.
ನಾಗರ ಅಮವಾಸ್ಯೆಯೊಂದಿಗೆ ಶ್ರಾವಣದ ಪವಿತ್ರ ತಿಂಗಳು ಶುರುವಾಗಿದ್ದರೂ ದೇವರ ದರ್ಶನ ಸಿಗುವುದು ದುರ್ಲಭವಾಯಿತು. ದೇವಸ್ಥಾನದ ಎದುರಿಗೆ ತೆರಳಿ ತೆಂಗಿನಕಾಯಿ ಒಡೆದು ಕರ್ಪೂರ, ಧೂಪ, ಊದಿನಕಡ್ಡಿಯನ್ನು ಬೆಳಗಿದರು. ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಾಲಯಕ್ಕೆ ಬೆಳಗ್ಗೆ ಭಕ್ತರ ದಂಡು ಆಗಮಿಸಿತ್ತು. ಆದರೆ, ಸರ್ಕಾರದ ಆದೇಶದಂತೆ ಬಂದ್ ಮಾಡಿದ್ದರಿಂದ ಭಕ್ತರು ಮುಖ್ಯರಸ್ತೆಯಲ್ಲಿರುವ ದೇವಾಲಯದ ಪ್ರವೇಶ ದ್ವಾರಕ್ಕೆ ಹೂವು–ಕಾಯಿ ಅರ್ಪಿಸಿದರು. ಅಲ್ಲಿಂದಲೇ ಶರಣರನ್ನು ಸ್ಮರಿಸಿದರು. ಶರಣಬಸವೇಶ್ವರ ದೇವಾಲಯ ಮುಂಭಾಗದಲ್ಲಿರುವ ಜಾತ್ರಾ ಮೈದಾನದಲ್ಲಿರುವ ಬೇವಿನ ಮರದ ಕೆಳಗಿನಿಂದಲೇ ಪೂಜೆ ಮಾಡಲು ದೇವಾಲಯದವರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದರಿಂದ ಬಳಿಕ ಭಕ್ತರು ಪ್ರವೇಶ ಬಾಗಿಲಿನಿಂದ ಬೇವಿನ ಮರದ ಬಳಿ ಹೋಗಿ ಅಲ್ಲಿ ಪೂಜೆ ಮಾಡಿದರು.