ಕಲಬುರಗಿ: ಇತ್ತೀಚೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರು ನಿಯಮಾವಳಿಗಳನ್ನು ಮೀರಿ, ತಾಲ್ಲೂಕು ಸದಸ್ಯರ ಅಭಿಪ್ರಾಯ ಪಡೆಯದೇ ಸರ್ವಾಧಿಕಾರಿಯಂತೆ ತಾಲ್ಲೂಕು ಅಧ್ಯಕ್ಷರ ನೇಮಕ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಸದಸ್ಯರ ಸಲಹೆ ಪಡೆದು ನೇಮಕ ಮಾಡಬೇಕು’ ಎಂದು ಒತ್ತಾಯಿಸಿ ವೀರಭದ್ರ ಸಿಂಪಿ ಅವರು ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ.
ಪರಿಷತ್ತಿನ ನಿಬಂಧನೆ 15ರಂತೆ ಆಯಾ ತಾಲ್ಲೂಕಿನ ಸದಸ್ಯರೊಂದಿಗೆ ಸಮಾಲೋಚನೆ ನಡೆಸಬೇಕು. ಆದರೆ, ಅಧ್ಯಕ್ಷರು ಕಲಬುರಗಿಯಲ್ಲೇ ಕುಳಿತು, ತಾಲ್ಲೂಕು ಸದಸ್ಯರ ಅಭಿಪ್ರಾಯ ಪಡೆಯದೇ ಸದಸ್ಯರನ್ನು ನೇಮಕ ಮಾಡಿರುವುದು ಪರಿಷತ್ತಿನ ನಿಯಮಗಳ ಉಲ್ಲಂಘನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಿಯಮ 14 (ಈ) ಪ್ರಕಾರ ಪರಿಷತ್ತಿನ ಕೇಂದ್ರ ಅಧ್ಯಕ್ಷರ ಅನು ಮೋದನೆ ಪಡೆದು ಪಟ್ಟಿ ಪ್ರಕಟಿಸಬೇಕು. ಇದನ್ನು ಉಲ್ಲಂಘಿಸಿ ಪಟ್ಟಿ ಪ್ರಕಟಿಸಿದ್ದಾರೆ. ಇದರಿಂದ ಪರಿಷತ್ತಿನ ಸಂಪ್ರದಾಯ, ಘನತೆ, ಗೌರವಗಳಿಗೆ ಧಕ್ಕೆಯುಂಟು ಮಾಡಿದಂತಾಗಿದೆ ಎಂದಿದ್ದಾರೆ.