ಕಲಬುರ್ಗಿ: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೈ ಕನ್ನಡಿಗರ ಸೇನೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್. ಭಾಸಗಿ ನೇತೃತ್ವದಲ್ಲಿ ಬಂದ ಪದಾಧಿಕಾರಿಗಳು, ‘ನಗರದಲ್ಲಿನ ರಾಮಮಂದಿರದ ಕೋಟನೂರು, ಕೇಂದ್ರ ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ಸಿಟಿ ಬಸ್ ನಿಲ್ದಾಣ, ದರ್ಗಾ, ಸರ್ಕಾರಿ ಆಸ್ಪತ್ರೆ, ರಿಂಗ್ ರಸ್ತೆಗಳು, ಶರಣಬಸವೇಶ್ವರ ದೇವಸ್ಥಾನ, ಆಳಂದ ಚೆಕ್ ಪೋಸ್ಟ್, ಖರ್ಗೆ ಪೆಟ್ರೋಲ್ ಪಂಪ್ ಮುಂತಾದ ಮುಖ್ಯ ಮಾರ್ಗಗಳಲ್ಲಿ ಹಾಗೂ ವೃತ್ತಗಳಲ್ಲಿ ಕಳ್ಳರು ಸಾರ್ವಜನಿಕರ ಹಣ ಹಾಗೂ ಮಹಿಳೆಯರ ಚಿನ್ನಾಭರಣ ಕದಿಯುವುದು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಇದರಿಂದ ಸಾರ್ವಜನಿಕರು ಓಡಾಡಲು ಭಯಪಡುತ್ತಿದ್ದಾರೆ. ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಂಡು ಕಳ್ಳರ ಹಾವಳಿ ನಿಯಂತ್ರಿಸಬೇಕು. ಹೆಚ್ಚಿನಪೋಲಿಸ್ ಕಾವಲು ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.
ಪಿಡಿಎ ಕಾಲೇಜಿನ ಎದುರಿನ ಡೈಮೆಂಡ್ ಪ್ಲಾಜಾ ಎದುರು ಇರುವ ವಾಹನ ನಿಲುಗಡೆ ನಿಷೇಧಿಸಲಾಗಿದ್ದರೂ ಅಲ್ಲಿ ಯಾವುದೇ ಫಲಕ ಹಾಕದೇ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಗೊತ್ತಾಗುತ್ತಿಲ್ಲ. ಇದರಿಂದ ಅಮಾಯಕರು ದಂಡ ನೀಡುತ್ತಿದ್ದಾರೆ. ಕೂಡಲೇ ಆ ಸ್ಥಳದಲ್ಲಿ ವಾಹನಗಳ ನಿಲುಗಡೆ ನಿಷೇಧದ ಕುರಿತು ಫಲಕ ಹಾಕಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ರಾಮಾ ಪೂಜಾರಿ, ಸಾಗರ ಸಿಂಗೆ, ರವಿಕುಮಾರ ಮಾಳಗೆ, ಪ್ರಶಾಂತ ಬಾಪುನಗರ, ಚೇತನಕುಮಾರ ಸಾಂಗ್ಲೇಕರ, ಸಮಶೀರ, ವಿಜಯಕುಮಾರ, ವಿಜಯ (ಡಾನ್ಸರ್), ಅಭಿಜಿತ್ ತಾರಫೈಲ, ರಾಕೇಶ ತಾರಫೈಲ, ಉಮೇಶ ತಾರಫೈಲ, ಪ್ರವೀಣ ತಾರಫೈಲ, ಅಮರ, ರಮೇಶ ಯಾದವ, ಸುಂದರ್ ಭೈರಾಮಡಗಿ ಇದ್ದರು.