ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಖರ್ಗೆ ಪತ್ರ

ರೈಲ್ವೆ ಸಚಿವರಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
Last Updated 24 ಮಾರ್ಚ್ 2022, 12:04 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ನೂತನ ರೈಲ್ವೆ ವಿಭಾಗ ಸ್ಥಾಪನೆ ಸೇರಿದಂತೆ ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳನ್ನು ಬೇಗ ಮುಗಿಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಅವರು ಪತ್ರ ಬರೆದಿದ್ದಾರೆ.

ರೈಲ್ವೆ ವಿಭಾಗ:ಹಿಂದುಳಿದ ಹೈದರಾಬಾದ್‌ಕರ್ನಾಟಕ ಪ್ರದೇಶವನ್ನು ಕೇಂದ್ರ ರೈಲ್ವೆ ವಿಭಾಗ, ದಕ್ಷಿಣ ಮಧ್ಯೆ ರೈಲ್ವೆ ವಿಭಾಗ ಹಾಗೂ ನೈಋತ್ಯ ವಿಭಾಗದೊಂದಿಗೆ ಬೆಸೆಯುವ ಉದ್ದೇಶದಿಂದ ಕಲಬುರಗಿಗೆಪ್ರತ್ಯೇಕ ರೈಲ್ವೆ ವಿಭಾಗವನ್ನು 2014ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ₹5 ಕೋಟಿ ಅನುದಾನ ಒದಗಿಸಿದ್ದಲ್ಲದೇ,ಕಚೇರಿ ನಿರ್ವಹಣೆ ನೋಡಿಕೊಳ್ಳಲು ವಿಶೇಷ ಅಧಿಕಾರಿಯನ್ನೂ ನೇಮಿಸಲಾಗಿತ್ತು.

ರಾಜ್ಯ ಸರ್ಕಾರ ಉಚಿತವಾಗಿ 32 ಎಕರೆ ಭೂಮಿ ಒದಗಿಸಿತ್ತು. ಈಗಲೂ ಕೂಡಾ ಆ ಭೂಮಿ ರೈಲ್ವೆ ಇಲಾಖೆಯ ಒಡೆತನದಲ್ಲಿದೆ. ಆದರೂ, ರೈಲ್ವೆ ಪ್ರಾಧಿಕಾರ ರೈಲ್ವೆ ವಿಭಾಗ ಸ್ಥಾಪನೆ, ಅಧಿಕಾರಿಗಳ ವಸತಿಗೃಹಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿಲ್ಲ ಎಂದು ಖರ್ಗೆ ದೂರಿದ್ದಾರೆ.

ಬೋಗಿ ಕಾರ್ಖಾನೆ: ಯಾದಗಿರಿ ಜಿಲ್ಲೆ ಕಡೇಚೂರು ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ 2014ರಲ್ಲಿ ಬೋಗಿ ಕಾರ್ಖಾನೆ ಮಂಜೂರಾಗಿತ್ತು. ಸದ್ಯ ಅದೊಂದು ಸಣ್ಣ ಪ್ರಮಾಣದ ಉದ್ಯಮವಾಗಿಕಾರ್ಯನಿರ್ವಹಿಸುತ್ತಿದೆ. ಈಗಿರುವ ಕಾರ್ಖಾನೆಯನ್ನು ವಿಸ್ತರಿಸುವ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸುಮಾರು 150 ಎಕರೆ ಜಮೀನನ್ನು ಒದಗಿಸಿತ್ತು.

ಏಳು ವರ್ಷ ಗತಿಸಿದರೂ ಸಹ ರೈಲ್ವೆ ಬೋಗಿ ಕಾರ್ಖಾನೆ ವಿಸ್ತರಣೆ ಕಾರ್ಯಕ್ಕೆ ಕ್ರಮ ಕೈಗೊಂಡಿಲ್ಲ. ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಈ ಕಾರ್ಖಾನೆಯ ವಿಸ್ತರಣೆ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಗದಗ-ವಾಡಿ ನೂತನ‌ ಮಾರ್ಗ: ಬೆಂಗಳೂರು- ಮುಂಬೈ ರೈಲ್ವೆ ಮಾರ್ಗವನ್ನು ಹೈದರಾಬಾದ್ (ದಕ್ಷಿಣ ಮಧ್ಯೆ ) ರೈಲ್ವೆ ಮಾರ್ಗದೊಂದಿಗೆ ಬೆಸೆಯುವ ಉದ್ದೇಶದಿಂದ ನೂತನ ಗದಗ- ವಾಡಿ ರೈಲು ಮಾರ್ಗವನ್ನು ಮಂಜೂರು ಮಾಡಲಾಗಿತ್ತು.

ನೂತನ ಮಾರ್ಗದ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗಿದ್ದು, ಯೋಜನೆಗೆ ಬೇಕಾಗುವ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ತೀವ್ರಗತಿಯಲ್ಲಿ ನಡೆಯಬೇಕಿದೆ. ಈ ಮಾರ್ಗದ ಸ್ಥಾಪನೆಗೆ ನಿಧಾನಗತಿ ಅನುಸರಿಸದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಿಟ್ ಲೈನ್: ಕಲಬುರಗಿ ರೈಲು ನಿಲ್ದಾಣದ ದಕ್ಷಿಣ ಹಾಗೂ ಉತ್ತರ ಭಾಗಕ್ಕೆ ಪಿಟ್ ಲೈನ್ ಸ್ಥಾಪನೆ ಕಾಮಗಾರಿ 2014 ರಲ್ಲೇ ಮಂಜೂರಾಗಿತ್ತು. ದಕ್ಷಿಣ ಭಾಗದ ಪಿಟ್ ಲೈನ್ ಕಾಮಗಾರಿ ಈಗಾಗಲೇ ಮುಗಿದಿದ್ದು, ಕಾರ್ಯನಿರ್ವಹಿಸುತ್ತಿದೆ. ಆದರೆ, ಉತ್ತರ ಭಾಗದ ಪಿಟ್ ಲೈನ್ ನಿರ್ಮಾಣ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಈ ಕೂಡಲೇ ಸದರಿ‌ ಕಾಮಗಾರಿ ಮುಗಿಸಿದರೆ, ಬೀದರ್ ಕಡೆಯಿಂದ ಬರುವ ರೈಲುಗಳಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಭೀಮಾ ನದಿಯಿಂದ ನೀರು: ಕಲಬುರಗಿ ರೈಲು ನಿಲ್ದಾಣಕ್ಕೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ರೈಲ್ವೆ ಬೋಗಿಗಳನ್ನು ತೊಳೆಯುವ ಉದ್ದೇಶದಿಂದ ಭೀಮಾ ನದಿಯಿಂದ ನೀರು ಒದಗಿಸುವ ಯೋಜನೆ ಹೊಂದಲಾಗಿತ್ತು. ಈ ಕೆಲಸ ಕೂಡಾ ಪ್ರಾರಂಭಿಸಿಲ್ಲ. ಇದನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT