ಕಲಬುರ್ಗಿ: ಇಲ್ಲಿನ ಕಲಬುರ್ಗಿ-ಯಾದಗಿರಿ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಮಧ್ಯೆಯೇ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾದ ಮೂವರು ನಿರ್ದೇಶಕರನ್ನು ಅನರ್ಹಗೊಳಿಸಲಾಗಿದೆ.
ಸಹಕಾರ ಸಂಘಗಳ ಜಂಟಿ ನಿಬಂಧಕರು ನವೆಂಬರ್ 25ರಂದು ಈ ಆದೇಶ ಹೊರಡಿಸಿದ್ದಾರೆ. ಆದರೆ ಅದನ್ನು ಇನ್ನೂ ಅವರಿಗೆ ತಲುಪಿಸಿಲ್ಲ. ಅವರು ಬ್ಯಾಂಕಿಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಬಹುದು. ಆದರೆ ಮತದಾನ ಮಾಡುವಂತಿಲ್ಲ.
ಏತನ್ಮಧ್ಯೆ ಸರ್ಕಾರದಿಂದ ಎರಡು ದಿನಗಳ ಹಿಂದೆಯಷ್ಟೇ ನಾಮನಿರ್ದೇಶನಗೊಂಡಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ ಸಜ್ಜನ ನಾಮಪತ್ರ ಸಲ್ಲಿಸಿದರು.
ಪ್ರಸ್ತುತ ಏಳು ಜನ ನಿರ್ದೇಶಕರು ಬ್ಯಾಂಕ್ ಆವರಣಕ್ಕೆ ಬಂದಿದ್ದು, ಇನ್ನೂ ಇಬ್ಬರು ನಿರ್ದೇಶಕರು ಬಂದರೆ ಚುನಾವಣೆ ನಡೆಯಲಿದೆ. ಇಲ್ಲದಿದ್ದರೆ ಮುಂದೂಡುವುದು ಅನಿವಾರ್ಯ ಎಂದು ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ನಿಂಬಾಳ ತಿಳಿಸಿದರು.