-ಓಂಕಾರ ಬಿರಾದಾರ
ಕಲಬುರಗಿ: ಮೇ ಮೊದಲ ವಾರದಲ್ಲಿ ಕ್ವಿಂಟಲ್ಗೆ ₹8,500 ಇದ್ದ ತೊಗರಿ ಬೆಲೆ, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾದ ಪರಿಣಾಮ ಒಂದೂವರೆ ತಿಂಗಳಲ್ಲಿ ಕ್ವಿಂಟಲ್ಗೆ ₹1,800ರಷ್ಟು ಹೆಚ್ಚಾಗಿದೆ.
ಜೂನ್ 22ರಂದು ಕ್ವಿಂಟಲ್ ಮಾದರಿ ತೊಗರಿ ₹10,500ವರೆಗೂ ಮಾರಾಟವಾಗಿದೆ. ಈಗ ದಾಲ್ಮಿಲ್ಗಳಲ್ಲಿ ತಯಾರಾದ ಬೇಳೆ ಬೆಲೆ ಪ್ರತಿ ಕ್ವಿಂಟಲ್ಗೆ ₹14,000ವರೆಗೆ ಮಾರಾಟವಾಗುತ್ತಿದೆ. ಮೇ ತಿಂಗಳಲ್ಲಿ ತೊಗರಿ ಬೇಳೆ ಪ್ರತಿ ಕೆ.ಜಿಗೆ ₹115ರಿಂದ ₹125ರವರೆಗೆ ಇತ್ತು. ಈಗ ರಿಟೇಲ್ ಮಾರುಕಟ್ಟೆಯಲ್ಲಿ ಇದರ ಬೆಲೆಯು ₹150ಕ್ಕೆ ತಲುಪಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಳೆದ ವರ್ಷ 4.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಅತಿವೃಷ್ಟಿ ಮತ್ತು ಪ್ರವಾಹದಿಂದ 1.29 ಲಕ್ಷ ಹೆಕ್ಟೇರ್, ಕೊಳೆ ರೋಗದಿಂದ 69,900 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿತ್ತು.
‘ಜಿಲ್ಲೆಯಲ್ಲಿ ನೆಟೆರೋಗದಿಂದ ಉತ್ಪಾದನೆ ಕಡಿಮೆಯಾಗಿ ತೊಗರಿ ಆವಕ ಕಡಿಮೆಯಾಗುತ್ತಿದೆ. ಪ್ರತಿದಿನ 2,000 ಕ್ವಿಂಟಲ್ನಷ್ಟು ಮಾತ್ರ ತೊಗರಿ ಎಪಿಎಂಸಿಗೆ ಬರುತ್ತಿದೆ. ವರ್ತಕರು ತಮ್ಮ ಬಳಿ ದಾಸ್ತಾನು ಇರುವ ತೊಗರಿಯನ್ನೂ ಮಾರುಕಟ್ಟೆಗೆ ಬಿಡುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ’ ಎಂದು ಕಲಬುರಗಿ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 150 ದಾಲ್ ಮಿಲ್ಗಳಿವೆ. ಈ ಎಲ್ಲಾ ಗಿರಣಿಗಳನ್ನು ನಿರಂತರವಾಗಿ ನಡೆಸಲು ಪ್ರತಿದಿನ 10 ಸಾವಿರದಿಂದ 15 ಸಾವಿರ ಕ್ವಿಂಟಲ್ ತೊಗರಿ ಆವಕ ಆಗಬೇಕು. ಆದರೆ, ಪ್ರತಿದಿನ ಕೇವಲ 2 ಸಾವಿರದಿಂದ 3 ಸಾವಿರ ಕ್ವಿಂಟಲ್ಗಳಷ್ಟು ತೊಗರಿ ಮಾರುಕಟ್ಟೆಗೆ ಬರುತ್ತಿದೆ ಎಂದು ಕಲಬುರಗಿ ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಸಂತೋಷ ಲಂಗರ್ ‘ಪ್ರಜಾವಾಣಿ’ಗೆ ತಿಳಿಸಿದರು.