ಕಲಬುರ್ಗಿ: ಕೊರೊನಾ ಸೋಂಕಿತರು ಉಚಿತವಾಗಿ ಪ್ರಯಾಣಿಸಲು ಜಿಲ್ಲಾ ಗುತ್ತಿಗೆದಾರರ ಅಸೋಸಿಯೇಷನ್ ವತಿಯಿಂದ ನೀಡಲಾದ ಏಳು ವಾಹನಗಳನ್ನು ಸೋಮವಾರ ಸೇವೆಗೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮುಖ್ಯಾಧಿಕಾರಿ ಜಗನ್ನಾಥ ಹಾಲಂಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಕೋವಿಡ್ನಿಂದಾಗಿ ಲಾಕ್ಡೌನ್ ಆದಾಗಿನಿಂದಲೂ ನಿತ್ಯವು ಸೋಂಕಿತರಿಗೆ ತುಂಬಾ ತೊಂದರೆಯಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಸೋಂಕಿತರು ಆಸ್ಪತ್ರೆಗೆ ಬರಲು ಆಂಬುಲೆನ್ಸ್ ಮತ್ತಿತರ ವಾಹನಗಳಿಗೆ ಕಾಯುತ್ತ ಕುಳಿತುಕೊಳ್ಳುವ ಸ್ಥಿತಿ ಇದೆ. ಇದನ್ನು ಗಮನಿಸಿ ಉಚಿತವಾಗಿ ವಾಹನ ವ್ಯವಸ್ಥೆ ಮಾಡಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಕೂಡ ಪಡೆಯಲಾಗಿದೆ’ ಎಂದರು.
‘ಜಿಲ್ಲೆಯ ಎಲ್ಲ ಗುತ್ತಿಗೆದಾರರು ತಮ್ಮ ಕೆಲಸ ಕಾರ್ಯಗಳಿಗೆ ಶ್ರಮಿಸುತ್ತಿರುವ ಕಾಮಿಕರಿಗೆ ಆಹಾರ ಧಾನ್ಯ ಹಾಗೂ ಹಣದ ನೇರವು ನೀಡಬೇಕು. ಅಲ್ಲದೇ ನಮ್ಮ ಗಳಿಕೆಗೆ ಅವರೇ ಆಧಾರ ಸ್ತಂಭವಾಗಿದ್ದಾರೆ. ಆದ್ದರಿಂದ ಕಾರ್ಮಿಕರಿಗೆ ನೆರವು ನೀಡುವುದು ಅತಿ ಅವಶ್ಯಕ’ ಎಂದೂ ಹೇಳಿದರು.
ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಿ. ಶೇಗಜಿ ಮಾತನಾಡಿ, ‘ಈ ವಾಹನಗಳಲ್ಲಿ ಗ್ರಾಮೀಣ ಪ್ರದೇಶ ಹಾಗೂ ಸ್ಥಳೀಯ ಯಾವುದೇ ಸ್ಥಳದವರೆಗೆ ಉಚಿತವಾಗಿ ಪ್ರಮಾಣಿಸಬಹುದು. ಸೋಂಕಿತರಿಗೆ ಉಚಿತವಾಗಿ ಪ್ರಯಾಣದ ಜೊತೆ ಉಪಾಹಾರ, ನೀರು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆಯಬೇಕು’ ಎಂದರು.
‘ಇದಲ್ಲದೇ, ರಸ್ತೆ ಹಾಗೂ ಕಟ್ಟಡ ನಿರ್ಮಾಣ ಕಾಮಿಕರಿಗೆ ಅವರು ಕೆಲಸ ಮಾಡುವ ಸ್ಥಳಗಳಿಗೆ ಓಡಾಡಲು ಕೂಡ ಉಚಿತವಾಗಿ ವಾಹನಗಳ ಸೌಲಭ್ಯ ಒದಗಿಸಲಾಗಿದೆ. ಕಾರ್ಮಿಕರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಬಹುದು’ ಎಂದರು.
ಅಸೋಸಿಯೇಷನ್ ಉಪಾದ್ಯಕ್ಷರಾದ ಎನ್.ಎಸ್.ಮೂಲಗೆ, ಮೊಹಸಿನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಚನ್ನಯ್ಯ ಮಠ, ಎಂ.ಕೆ. ಪಾಟೀಲ, ಖಚಾಂಚಿ ಸಂಜಯ್ ಆರ್.ಕೆ, ಅಶೋಕ ಹೌದೆ, ಮಹಾದೇವಪ್ಪ ಬಿ. ಗುತ್ತೇದಾರ ಸೇರಿದಂತೆ ಇನ್ನಿತರರು ಇದ್ದರು.