ಕಲಬುರಗಿ: ಪರಿಶಿಷ್ಟ ಜಾತಿಗೆ ಮೇಯರ್ ಸ್ಥಾನ ಮೀಸಲಾತಿ ಅಂತಿಮವಾದ ಬಳಿಕ ಬಿಜೆಪಿ ವರಿಷ್ಠರ ಎದುರು ಇದ್ದುದು ಮೂರು ಜನರ ಹೆಸರು. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ವಿಶಾಲ ದರ್ಗಿ, ಲಂಬಾಣಿ ಸಮುದಾಯಕ್ಕೆ ಸೇರಿದ ಕೃಷ್ಣಾ ನಾಯಕ ಹಾಗೂ ಭೋವಿ ಸಮುದಾಯಕ್ಕೆ ಸೇರಿದ ಹೊನ್ನಮ್ಮ ಬಾಬು ಹಾಗರಗಿ ಅವರದ್ದು.
ಅಂತಿಮವಾಗಿ ಕೆಕೆಆರ್ಡಿಬಿ ಅಧ್ಯಕ್ಷ, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಆಪ್ತ ವಿಶಾಲ ದರ್ಗಿ ಅವರಿಗೆ ನಾಮಪತ್ರ ಸಲ್ಲಿಸಲು ಪಕ್ಷದ ವರಿಷ್ಠರು ಅವಕಾಶ ನೀಡಿದರು. ಪಕ್ಷ ನಿಷ್ಠೆ, ಹಿರಿತನ ಹಾಗೂ ರೇವೂರ ಕುಟುಂಬದೊಂದಿಗೆ ಒಡನಾಟ ಹೊಂದಿರುವುದರಿಂದ ಮೇಯರ್ ಹುದ್ದೆ ಒಲಿದು ಬಂದಿದೆ. ದರ್ಗಿ ಅವರು ಮೂರನೇ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ವಿಶೇಷ ಎಂದರೆ ಪರಿಶಿಷ್ಟ ಸಮುದಾಯಕ್ಕೆ ಮೀಸಲಿಲ್ಲದ ಸಾಮಾನ್ಯ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆದ್ದಿರುವುದು.ದರ್ಗಿ ಅವರನ್ನು ಮೇಯರ್ ಮಾಡುವಲ್ಲಿ ಅವರ ಸಮುದಾಯದ ಮತಗಳನ್ನು ಬಿಜೆಪಿಯತ್ತ ತಿರುಗಿಸಿ ಕೊಳ್ಳುವ ತಂತ್ರವೂ ಇದೆ ಎನ್ನುತ್ತಾರೆ ಬಿಜೆಪಿ ಮುಖಂಡರು. ಕೆಲವೇ ದಿನ ಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಮತ್ತೆ ಆಯ್ಕೆ ಬಯಸಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಪರಿಶಿಷ್ಟ ಸಮುದಾಯದ ಮತಗಳೂ ನೆರವಾಗಬೇಕು ಎಂಬ ಉದ್ದೇಶದಿಂದ ಆ ಸಮುದಾಯದವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತದೆ.
ಒಂದು ಅಂದಾಜಿನ ಪ್ರಕಾರ, ಕ್ಷೇತ್ರದಲ್ಲಿ ವೀರಶೈವ–ಲಿಂಗಾಯತ ಸಮಾಜವು ಅತಿ ಹೆಚ್ಚಿನ ಸಂಖ್ಯೆಯ ಲ್ಲಿದ್ದು, ನಂತರದ ಸ್ಥಾನ ಪರಿಶಿಷ್ಟ ಬಲಗೈ ಸಮುದಾಯದ್ದಾಗಿದೆ. ನಗರದ ಹೀರಾಪುರ, ಸುಂದರ ನಗರ, ತಾರಫೈಲ್, ಬಾಪು ನಗರ, ಸಿದ್ಧಾರ್ಥ ಕಾಲೊನಿ, ಪಂಚಶೀಲ ನಗರದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ದಲಿತ ಸಮುದಾಯದವರಿದ್ದಾರೆ.
ವಿಶಾಲ ದರ್ಗಿ ಅವರು ಮೇಯರ್ ಆಗಿ ಆಯ್ಕೆಯಾಗುತ್ತಿದ್ದಂತೆಯೇ ನೀಲಿ ಬಾವುಟ ಹಿಡಿದ ದಲಿತ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಿ ಸಂಭ್ರಮಿಸಿದ್ದು ಗಮನಾರ್ಹ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.