ಚಿತ್ತಾಪುರ(ಕಲಬುರಗಿ): ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿ ವನ್ಯಪ್ರಾಣಿಗಳನ್ನು ಬೇಟೆಯಾಡಿ ಅವುಗಳ ದೇಹದ ಭಾಗಗಳು, ಚರ್ಮ ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅರಣ್ಯಾಧಿಕಾರಿಗಳ ತಂಡ ಮೂವರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದೆ.
ತಾಲ್ಲೂಕಿನ ನಾಲವಾರ ಹೋಬಳಿಯ ರಾಂಪುರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡವು ಸೋಮವಾರ ದಾಳಿ ಮಾಡಿ, ಹಣಮಂತ ಮಲ್ಲಪ್ಪ, ಭೀಮರಾಯ ಯಲ್ಲಪ್ಪ ಮತ್ತು ಮಲ್ಲಪ್ಪ ಲಕ್ಷ್ಮಣ ಅವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸಾಯಬಣ್ಣ ಲಕ್ಷ್ಮಣ ಅವರು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಚಿಪ್ಪು ಹಂದಿಯ ಚಿಪ್ಪು, ಮುಳ್ಳು ಹಂದಿಯ ಮುಳ್ಳುಗಳು, ಕಾಡು ಹಂದಿಯ ಕೋರೆಹಲ್ಲುಗಳು, ಮುಂಗುಸಿಯ ಕೂದಲು, ನೀರುನಾಯಿ ಚರ್ಮ ವಶಪಡಿಸಿಕೊಳ್ಳಲಾಗಿದೆ.
ವನ್ಯಪ್ರಾಣಿಗಳ ಬೇಟೆಯಾಡಲು ಬಳಸುವ ಭರ್ಚಿ, ಉರುಳು ಹಾಕಲು ಕ್ಲಚ್ ವೈರ್ ತಂತಿ, ಬ್ಯಾಟರಿ ಟಾರ್ಚ್, ಚೂರಿ, ಪಂಜ, ಮೀನು ಹಿಡಿಯುವ ಬಲೆ, ಕಬ್ಬಿಣದ ರಾಡು ಹಾಗೂ ಮೂರು ಮೊಬೈಲ್, ಎರಡು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ ಅವರು ತಿಳಿಸಿದ್ದಾರೆ.
ಪರಾರಿಯಾಗಿರುವ ಆರೋಪಿಯ ಶೋಧಕಾರ್ಯ ಅರಣ್ಯ ಇಲಾಖೆ ಸಿಬ್ಬಂದಿ ಮುಂದುವರೆಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಉಲ್ಲಂಘನೆಯಡಿ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.