ಕಲಬುರ್ಗಿ: ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದ ಅಂಬಾಭವಾನಿ ದೇವಿಯ ದರ್ಶನವನ್ನು ಗುರುವಾರ ಅಪಾರ ಸಂಖ್ಯೆಯ ಭಕ್ತರು ಮಾಡಿದರು. ಶೀಗಿ ಹುಣ್ಣಿಮೆ ಅಂಗವಾಗಿ ಮಹಾರಾಷ್ಟ್ರ,ಕರ್ನಾಟಕ, ತೆಲಂಗಾಣ ರಾಜ್ಯದ ಭಕ್ತರು ದೇವಿಯ ದರ್ಶನ ಪಡೆದರು.
ವಿಜಯದಶಮಿಯ ದಿನ ಅಂಬಾಭವಾನಿ ದೇವಸ್ಥಾನದ ಬಾಗಿಲು ಮುಚ್ಚಿ, ಶೀಗಿ ಹುಣ್ಣಿಮೆಯ ದಿನ ತೆರೆಯಲಾಗುವುದು. ಹುಣ್ಣಿಮೆಯ ದಿನ ದೇವಿ ದರ್ಶನ ಪಡೆಯುವುದು ಒಳ್ಳೆಯದು ಎಂಬ ನಂಬಿಕೆ ಭಕ್ತರಲ್ಲಿದೆ.
ಹೀಗಾಗಿ ಬುಧವಾರ ಸಂಜೆಯಿಂದ ಬೆಳಗಿನ ಜಾವದ ವರೆಗೂ ಸರತಿಯಲ್ಲಿ ನಿಂತಿದ್ದರು. ಹೆಚ್ಚಿನ ಭಕ್ತರು ಪಾದಯಾತ್ರೆ ಮೂಲಕ ತುಳಜಾಪುರವನ್ನು ತಲುಪಿ ದೇವಿಯ ದರ್ಶನ ಪಡೆದರು.
ದೇವಿಯ ದರ್ಶನಕ್ಕೆ ತೊಂದರೆ ಆಗದಂತೆ ಮಹಾರಾಷ್ಟ್ರ ಮತ್ತು ರಾಜ್ಯದ ಸಾರಿಗೆ ಸಂಸ್ಥೆಗಳು ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಿದವು. ಖಾಸಗಿ ವಾಹನಗಳು ಕಡಿಮೆ ದರದಲ್ಲಿ ಸೇವೆ ಒದಗಿಸಿದವು.