ಚಿಂಚೋಳಿ: ‘ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ ಅವರ ಭ್ರಷ್ಟಾಚಾರದಿಂದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ವಲ್ಲ್ಯಾಪುರ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದರು.
ಮತಕ್ಷೇತ್ರದಲ್ಲಿ ನೀವು ಗುರುತಿಸಿರುವ ಸಮಸ್ಯೆಗಳು ಯಾವುವು?
ಚಿಂಚೋಳಿ ಮತಕ್ಷೇತ್ರ ಎಂದರೆ ಅದು ಸಮಸ್ಯೆಗಳ ತವರೂರು ಎಂದೇ ಕರೆಯಲಾಗುತ್ತದೆ. ಇಲ್ಲಿನ ಜನರು ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಮ ಹಾಗೂ ತಾಂಡಾಗಳಲ್ಲಿ ಕುಡಿವ ನೀರಿನ ಅಭಾವ ತೀವ್ರಗೊಂಡಿದೆ. ರಸ್ತೆ ಸಮಸ್ಯೆಯೂ ಇದೆ.
ನೀವು ಒಂದು ಅವಧಿಗೆ ಶಾಸಕ, ಸಚಿವರು ಆಗಿದ್ದೀರಿ, ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?
ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ನಾನು ಎರಡು ತಿಂಗಳು ಮಂತ್ರಿಯಾಗಿದ್ದ ಅವಧಿಯಲ್ಲಿ ಕಾಳಗಿ ತಾಲ್ಲೂಕು ಘೋಷಣೆ ಮಾಡಿಸಿದ್ದೇನೆ. ಶಾಸಕನಾಗಿ ₹495 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಗ್ರಾಮಗಳು ಮತ್ತು ತಾಂಡಾಗಳಿಗೆ ಮೂಲ ಸೌಕರ್ಯ ಕಲ್ಪಿಸಿದ್ದೇನೆ. ಚಂದನಕೇರಾ ಬಹುಗ್ರಾಮ ಕುಡಿವ ನೀರಿನ ಯೋಜನೆ ಜತೆಗೆ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಗ್ರಾಮೀಣ ಜನರ ನೀರಿನ ಬವಣೆ ನೀಗಿಸಿದ್ದೇನೆ. ಚಂದ್ರಂಪಳ್ಳಿ ನೀರಾವರಿ ಯೋಜನೆ ಕಾಲುವೆಗಳ ಆಧುನಿಕರಣಕ್ಕೆ ಶ್ರಮಿಸಿ ರೈತರಿಗೆ ನೆರವಾಗುವ ಕೆಲಸ ಮಾಡಿದ್ದೇನೆ.
ಬಿಜೆಪಿಯಲ್ಲಿಯ ಭಿನ್ನಮತ ಪರಿಣಾಮ ಬೀರುತ್ತದೆಯೇ?
ಬಿಜೆಪಿಯಲ್ಲಿ ಭಿನ್ನಮತವೇ ಇಲ್ಲ. ಇಬ್ಬರು ಇದ್ದರು, ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. ಟಿಕೆಟ್
ಕೇಳುವ ಹಕ್ಕು ಪ್ರತಿಯೊಬ್ಬ ಕಾರ್ಯಕರ್ತರಿಗೂ ಇದೆ. ಇದಕ್ಕೆ ನನ್ನ ಅಭ್ಯಂತರವಿಲ್ಲ. ಟಿಕೆಟ್ ಕೇಳಿದ ಸಂಜೀವನ್ ಯಾಕಾಪುರ, ಸುಭಾಷ್ ರಾಠೋಡ ಮತ್ತು ನಾನು ಒಟ್ಟಾಗಿದ್ದೇವೆ. ಪಕ್ಷ ನನಗೆ ಟಿಕೆಟ್ ನೀಡಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಗ್ಗೆ ಅನುಮಾನ ಬೇಡವೇ ಬೇಡ.
ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
ಶಾಸಕ ಡಾ.ಉಮೇಶ ಜಾಧವ್ ಅವರ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದಿಂದ ಕ್ಷೇತ್ರ ಸಮಸ್ಯೆಗಳ ಸಂಕೋಲೆಗೆ ಸಿಲುಕಿದೆ. ಅಭಿವೃದ್ಧಿ ಮಾಯವಾಗಿದೆ. ಹೀಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನ್ನನ್ನು ಆಯ್ಕೆ ಮಾಡಬೇಕು.
ಗೆದ್ದರೆ ನಿಮ್ಮ ಆದ್ಯತೆ ಏನು?
ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ. ನೀರು ಹಾಗೂ ನೀರಾವರಿ ಜತೆಗೆ ನಗರ ಮತ್ತು ಗ್ರಾಮೀಣ ನಾಗರಿಕರಿಗೆ ಸುಸಜ್ಜಿತ ನಾಗರಿಕ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುತ್ತೇನೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನೆರವಾಗುವುದರ ಜತೆಗೆ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವುದು ನನ್ನ ಧ್ಯೇಯ.
–ಜಗನ್ನಾಥ ಡಿ. ಶೇರಿಕಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.