ಕಲಬುರ್ಗಿ: ‘ಇಂದಿನ ಮಕ್ಕಳು ಸಾಹಿತ್ಯ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಬರವಣಿಗೆ ಬಲವಂತದಿಂದ ಬರುವುದಿಲ್ಲ. ಅಭಿರುಚಿ ಕೊರತೆಯಿಂದ ಸಾಂಸ್ಕೃತಿಕ ಬಿಕ್ಕಟ್ಟು ಹೆಚ್ಚುತ್ತಿದೆ’ ಎಂದು ಸಾಹಿತಿ ಡಾ.ಗೀತಾ ನಾಗಭೂಷಣ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಕಲಾ ಮಂಡಳದಲ್ಲಿ ಭಾನುವಾರ ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆದ ಡಾ.ಮಲ್ಲಿನಾಥ ತಳವಾರ ಅವರ ಕಥಾ ಸಂಕಲನ ‘ಮುತ್ತಿನ ಸಂಕೋಲೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಥೆ ಕಟ್ಟೋದು ಕಲ್ಪನೆಯಾದರೆ, ಕಥೆ ಹೇಳುವುದು ನೈಜತೆ. ಕಾದಂಬರಿಕಾರರು ಹೆಚ್ಚಾಗಬೇಕಿದೆ. ಸಮಾಜದ ಬಗ್ಗೆ ತುಡಿತವಿರುವವರು ಅಸಾಮಾನ್ಯ ವ್ಯಕ್ತಿತ್ವ ಹೊಂದಿರುತ್ತಾರೆ’ ಎಂದು ಹೇಳಿದರು.
‘ಸಾಹಿತ್ಯ ಹಾಗೂ ವಿದ್ಯೆಗೆ ಸಂಬಂಧವಿಲ್ಲ. ಅನಕ್ಷರಸ್ಥರು ಜಾನಪದ ಕಟ್ಟಿ ಬೆಳೆಸಿದ್ದಾರೆ. ಜಗತ್ತಿನಲ್ಲಿ ಪ್ರೀತಿ ಇಲ್ಲದೆ ಏನು ಇಲ್ಲ. ಪ್ರೀತಿ ಕೇವಲ ಹರೆಯದವರಿಗೆ ಸೀಮಿತವಾದದಲ್ಲ. ವೃದ್ಧರು ಪ್ರೀತಿಸಬಹುದು. ನಮ್ಮದು ನಿಸ್ವಾರ್ಥ ಪ್ರೀತಿಯಾಗಿರಬೇಕು’ ಎಂದರು.
‘ಕಥೆಗಳ, ಕಾದಂಬರಿಗಳಲ್ಲಿ ಜನರ ಭಾಷೆ, ಸಂದರ್ಭಕ್ಕೆ ಹೊಂದುವಂತಹ ಸಹಜ ವರ್ಣನೆ ಅಗತ್ಯ. ಮನರಂಜನೆಗಾಗಿ ಬರೆಯುವುದಕ್ಕಿಂತ ಹಸಿದವರ, ಶೋಷಿತರ, ನೊಂದ ಜನರ ಪರ ಧ್ವನಿಯಾಗಬೇಕು. ಹೆಣ್ಣು ಕೋಮಲೆ, ಆದರೆ ದುರ್ಬಳಲಲ್ಲ’ ಎಂದು ಹೇಳಿದರು.
ಡಾ.ಚಂದ್ರಕಲಾ ಬಿದರಿ ಮಾತನಾಡಿ, ‘ಸಮಾಜದಲ್ಲಿ ರಾಕ್ಷಸ ಪ್ರವೃತ್ತಿ ಹೆಚ್ಚುತ್ತಿದೆ. ಮಹಿಳೆಗೆ ಸುರಕ್ಷಿತ ವಾತಾವರಣ ಇಲ್ಲವಾಗಿದೆ. ಅತ್ಯಾಚಾರದಂತಹ ಹೇಯ ಕೃತ್ಯಗಳು ವಿಜೃಂಭಿಸುತ್ತಿವೆ. ಇವೆಲ್ಲ ಪುರುಷ ಪ್ರಧಾನ ಸಮಾಜದ ದ್ಯೂತಕಗಳು’ ಎಂದು ವಿಷಾದಿಸಿದರು.
ಕನ್ನಡ ನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ, ಪ್ರೊ.ಬಿ.ಕೆ.ಚಳಗೇರಿ, ಎಲ್.ಪಿ.ಪುಟ್ಟಣ್ಣಯ್ಯ, ಬಿ.ಎಚ್.ನಿರಗುಡಿ ಇದ್ದರು.