ಕಸಬಾ (ಕನಕಪುರ): ಕಸಬಾ ಹೋಬಳಿ ನಾರಾಯಣಪುರ ಗ್ರಾಮ ಪಂಚಾಯಿತಿಯ ಕಲ್ಕೆರೆದೊಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕಾಗಿ ನಡೆದಿದ್ದ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಕೃಷ್ಣಮೂರ್ತಿ ಕೆ.ಜಿ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸುಶೀಲ ಅವರಿಗಿಂತ 55 ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಜ.2 ರಂದು ಚುನಾವಣೆಯಾಗಿ ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 415 ಮತ ಚಲಾವಣೆಯಾಗಿದ್ದವು. ಅವುಗಳಲ್ಲಿ ಕೃಷ್ಣಮೂರ್ತಿ ಕೆ.ಜಿ.ಗೆ 232, ಸುಶೀಲ ಅವರಿಗೆ 177 ಲಭಿಸಿದವು. 6 ಮತಗಳು ತಿರಸ್ಕೃತಗೊಂಡಿವೆ.
ತಹಶೀಲ್ದಾರ್ ಎಂ.ಆನಂದಯ್ಯ ಅವರ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಜಯ ಗಳಿಸಿದ ಕೃಷ್ಣಮೂರ್ತಿ ಅವರಿಗೆ ಆನಂದಯ್ಯ ಅವರು ಪ್ರಮಾಣಪತ್ರ ವಿತರಿಸಿದರು.