ವಿರಾಜಪೇಟೆ: ಕೆದಮುಳ್ಳೂರಿನಲ್ಲಿ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವವು ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಸೋಮವಾರ ಮುಕ್ತಾಯಗೊಂಡಿತು.
ಶನಿವಾರ ಕೊಟ್ಟಿಪಾಡುವುದ ರೊಂದಿಗೆ ವಾರ್ಷಿಕ ತೆರೆಗೆ ಚಾಲನೆ ನೀಡಲಾಯಿತು. ಭಾನುವಾರ ತಕ್ಕರ ಮನೆಯಿಂದ ಭಂಢಾರ ತಂದು ಮೇಲೇರಿ ಹಾಕುವುದು ಸೇರಿದಂತೆ ವಿವಿಧ ತೆರೆ ನಡೆಯಿತು. ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಪ್ರಮುಖವಾದ ವಿಷ್ಣುಮೂರ್ತಿ ದೇವರ ತೆರೆಯು ನಡೆಯಿತು.
ಮಧ್ಯಾಹ್ನ 12ರ ಸುಮಾರಿಗೆ ಉತ್ಸವದ ಮತ್ತೊಂದು ಪ್ರಮುಖ ತೆರೆಯಾದ ಚಾಮುಂಡಿ ದೇವಿಯ ತೆರೆ ನಡೆಯಿತು. ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಸಂಜೆ ವೇಳೆಗೆ ಬನಕ್ಕೆ ತೆರಳಿ ಅಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುವ ಮೂಲಕ ವಾರ್ಷಿಕ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಉತ್ಸವದಲ್ಲಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.