ಸೋಮವಾರಪೇಟೆ: ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಕೃಷಿಕರಾದ ಯು.ಪಿ.ರಾಜು, ನಂದಕುಮಾರ್, ಜಯಂತ್ ಮತ್ತಿತರ ಕೃಷಿ ಜಮೀನಿಗೆ ಬುಧವಾರ ರಾತ್ರಿ ವೇಳೆಯಲ್ಲಿ ಕಾಡಾನೆಗಳು ಫಸಲಿಗೆ ಬಂದ ಬೆಳೆಗಳನ್ನು ನಾಶಪಡಿಸಿದ್ದು ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಕಾಫಿ, ಮೆಣಸು, ಭತ್ತದ ಫಸಲು ನಷ್ಟವಾಗಿದ್ದು ಇದೀಗ ಕಾಡಾನೆ ದಾಳಿಯಿಂದ ಹಲಸು, ಜೋಳ, ಫಸಲಿಗೆ ಬಂದಿದ್ದ ಗೆಣಸು, ಪಪ್ಪಾಯ, ಬಾಳೆ ಗಿಡಗಳು ಸಂಪೂರ್ಣ ನಾಶಗೊಂಡಿವೆ.
ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಗ್ರಾಮದ ರಾಜು ಎಂಬುವವರ ಕಾಫಿ ತೋಟದಲ್ಲಿ ಬಾಳೆಗಿಡಗಳನ್ನು ನಾಶ ಮಾಡಿರುವುದು
‘ಕಾಡಾನೆ ದಾಳಿ ಕುರಿತು ಹಲವು ವರ್ಷಗಳಿಂದ ಇಲಾಖೆಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆ ಹಾವಳಿ ತಡೆಗೆ ಶಾಶ್ವತ ಯೋಜನೆ ತಯಾರಿಸಬೇಕು’ ಎಂದು ಆಗ್ರಹಿಸಿದ್ದಾರೆ.