ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರ: ಜೀವ ಪಡೆಯುತ್ತಿದೆ ದುಬಾರೆ

ಮಳೆಯ ನಡುವೆ ಪ್ರವಾಸಿಗರ ಕಲರವ, ದೋಣಿ ವಿಹಾರ ಆರಂಭ
Published 22 ಮೇ 2024, 6:58 IST
Last Updated 22 ಮೇ 2024, 6:58 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ದುಬಾರೆ ಹಾಗೂ ಕಾವೇರಿ ನಿಸರ್ಗಧಾಮದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಇಡೀ ‍ಪರಿಸರ ಜೀವ ತಳೆಯುತ್ತಿದೆ.

ಜನವರಿಯ ನಂತರ ಇಲ್ಲಿನ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುತ್ತಾ ಬಂದು, ಸುಮಾರು ಒಂದು ತಿಂಗಳಿನಿಂದ ಸಂಪೂರ್ಣ ಬರಡಾಗಿತ್ತು. ನದಿಯ ಈ ದಡದಿಂದ ಆಚೆಗಿನ ದಡಕ್ಕೆ ನಡೆದುಕೊಂಡು ಹೋದರೆ ಒಂದು ಹನಿ ನೀರು ಕಾಲಿಗೆ ಅಂಟದಂತಹ ನಿರ್ಜೀವ ಪರಿಸ್ಥಿತಿ ಎದುರಾಗಿತ್ತು. ಎಲ್ಲಿ ನೋಡಿದರೂ ಕಲ್ಲು ಬಂಡೆಗಳು ಮಾತ್ರ ಗೋಚರಿಸುತ್ತಿದ್ದವು. ರ‍್ಯಾಫ್ಟಿಂಗ್ ಮತ್ತು ದೋಣಿವಿಹಾರದ ಕನಸಿನೊಂದಿಗೆ ಬಂದ ಪ್ರವಾಸಿಗರು ನಿರಾಸೆಯಿಂದ ವಾಪಸ್ ತೆರಳುತ್ತಿದ್ದರು. ಆದರೆ, ಈಗ ಬೀಳುತ್ತಿರುವ ಮಳೆಯಿಂದ ನದಿಯಲ್ಲಿ ನೀರು ಹರಿಯಲು ಆರಂಭಿಸಿದೆ. ದೋಣಿ ವಿಹಾರ ಶುರುವಾಗಿದ್ದು, ರ‍್ಯಾಫ್ಟಿಂಗ್ ಆರಂಭಕ್ಕೂ ಕ್ಷಣಗಣನೆ ಆರಂಭವಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ದುಬಾರೆ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಪ್ರವಾಸಿ ತಾಣಗಳ ವಾತಾವರಣವೇ ಬದಲಾವಣೆಯಾಗಿತ್ತು. ಇದೀಗ ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಗೆ ಜೀವ ಕಳೆ ಬಂದಿದೆ. ಸಂಪೂರ್ಣ ಒಣಗಿದ‌ ನದಿಯಲ್ಲಿ ಜೀವಸೆಲೆ ಬಂದಂತೆ ಆಗಿದ್ದು, ನೀರಿನ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ದುಬಾರೆ ಕಾವೇರಿ ನದಿಯಲ್ಲಿ ಈಗ ಸ್ಟಿಲ್ ವಾಟರ್ ರಿವರ್ ರಾಫ್ಟಿಂಗ್ ಕ್ರೀಡೆಗೆ ಮರು ಚಾಲನೆ ನೀಡಲಾಗಿದೆ. ಅದೇ ರೀತಿ ಗುಡ್ಡೆಹೊಸೂರು ಬಳಿಯ ಕಾವೇರಿ ನಿಸರ್ಗಧಾಮದಲ್ಲಿ ಕೂಡ ದೋಣಿ ವಿಹಾರ ಆರಂಭಗೊಂಡಿದೆ. ಇದರಿಂದ ಪ್ರವಾಸಿಗರಿಗೆ ಸಂತಸ ಉಂಟಾಗಿದೆ.

ಮಳೆಯಿಂದಾಗಿ ಒಣಗಿ ನಿಂತಿದ್ದ ಗಿಡಮರಗಳು ಚಿಗುರೊಡೆದು ಹಸಿರಿನಿಂದ ಕಂಗೊಳಿಸುತ್ತಿವೆ. ಮಳೆಯ ನಡುವೆಯೂ ಕೂಡ ದೂರದ ಊರುಗಳಿಂದ ತಂಡೋಪತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದು, ಎಲ್ಲೆಡೆ ತುಂಬಿರುವ ದೃಶ್ಯ ಕಂಡು ಬರುತ್ತಿದೆ. ಪ್ರವಾಸಿ ತಾಣಗಲ್ಲಿ ಪ್ರವಾಸಿಗರ ಕಲರವ ರಂಗೇರಿಸಿದೆ. ಬಿರುಬಿಸಿಲಿನಿಂದ ಕಾವೇರಿ ನದಿ ಒಣಗಿ ಹೋದ ಪರಿಣಾಮ ಪ್ರವಾಸೋದ್ಯಮವನ್ನೇ ನಂಬಿ‌ ಬದುಕು ಕಟ್ಟಿಕೊಂಡಿದ್ದ ರಿವರ್ ರಾಫ್ಟ್ ಉದ್ಯಮಿಗಳಿಗೆ ಪ್ರಸ್ತುತ ಮಳೆಯ ವಾತಾವರಣ ಸಮಾಧಾನ ತರಿಸಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರು ದುಬಾರೆಯತ್ತ ಆಗಮಿಸುತ್ತಿದ್ದು, ನದಿಯಲ್ಲಿ ನೀರಿನ‌ ಹರಿವು ಹೆಚ್ಚುತ್ತಿರುವ ಕಾರಣ ಸ್ಟಿಲ್ ವಾಟರ್ ಜಲಕ್ರೀಡೆ ಆರಂಭಿಸಲಾಗಿದೆ. ಇರುವ ನೀರಿನಲ್ಲಿ ರಾಫ್ಟ್ ಬೋಟ್‌ಗಳಲ್ಲಿ ಪ್ರವಾಸಿಗರನ್ನು ನದಿಯಲ್ಲಿ ಸುತ್ತು ಹೊಡೆಸಲಾಗುತ್ತಿದೆ.

‘ಮುಂದಿನ ದಿನಗಳಲ್ಲಿ ಉತ್ತಮ‌ ಮಳೆಯಾದರಲ್ಲಿ ವೈಟ್ ವಾಟರ್ ಸಾಹಸಿ ಕ್ರೀಡೆ ಆರಂಭಿಸಲಾಗುವುದು’ ಎಂದು ರಿವರ್ ರಾಫ್ಟಿಂಗ್ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಹೇಳಿದರು.

ದುಬಾರೆಯಲ್ಲಿ ಸುಮಾರು 70 ರಿಂದ 80ರಷ್ಟು ರಾಫ್ಟ್ ಬೋಟ್‌ಗಳಿವೆ. ಇದನ್ನೇ ನಂಬಿರುವ ಬೋಟ್ ಮಾಲೀಕರು, ಕಾರ್ಮಿಕರಿಗೆ ಮಳೆಯಿಲ್ಲದೆ ತೀವ್ರ ಸಮಸ್ಯೆ ಎದುರಾಗಿತ್ತು. ಇದೀಗ ನದಿಯಲ್ಲಿ ಒಂದೂವರೆ ಕಿಮೀ ನಲ್ಲಿ ‘ಸ್ಟಿಲ್ ವಾಟರ್’ ಕ್ರೀಡೆ ನಡೆಸಲಾಗುತ್ತಿದೆ. ಉತ್ತಮ ಮಳೆಯಾದಲ್ಲಿ ಜೂನ್, ಜುಲೈ ತಿಂಗಳಲ್ಲಿ ವೈಟ್ ವಾಟರ್ ಕ್ರೀಡೆ ನಡೆಯಲಿದೆ ಎಂದು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದ್ದು, ಪ್ರವಾಸೋದ್ಯಮ ನಂಬಿಕೊಂಡಿರುವ ಉದ್ಯಮಿಗಳಿಗೆ ಸಂತೋಷ ಉಂಟಾಗಿದೆ ಎಂದು ದುಬಾರೆ ಇನ್ ಮಾಲೀಕ ರತೀಶ್ ತಿಳಿಸಿದರು.

ಕುಶಾಲನಗರ ಸಮೀಪದ ದುಬಾರೆ ಕಾವೇರಿ ನದಿಯಲ್ಲಿ ನೀರಿನ ಹರಿವಿನಲ್ಲಿ ಏರಿಕೆಯಾಗಿದ್ದು ರಿವರ್ ರಾಫ್ಟಿಂಗ್ ಕ್ರೀಡೆಗೆ ಚಾಲನೆ ನೀಡಲಾಗಿದೆ
ಕುಶಾಲನಗರ ಸಮೀಪದ ದುಬಾರೆ ಕಾವೇರಿ ನದಿಯಲ್ಲಿ ನೀರಿನ ಹರಿವಿನಲ್ಲಿ ಏರಿಕೆಯಾಗಿದ್ದು ರಿವರ್ ರಾಫ್ಟಿಂಗ್ ಕ್ರೀಡೆಗೆ ಚಾಲನೆ ನೀಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT