ಕುಶಾಲನಗರ: ತೊರೆನೂರು ಗ್ರಾಮದ ಗಿರಿಗೌಡ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಬೇಕು ಆಗ್ರಹಿಸಿ ಪ್ರತಿಭಟನೆ ನಡೆಸಿದ ನಿವಾಸಿಗಳು ವಿಳಂಬವಾದರೆ ಮುಮದಬರುವ ಚುನಾವಣೆ ಬಹಿಷ್ಕರಿಸುವುದಾಗಿ ಫಲಕ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ತಗ್ಗು ಪ್ರದೇಶದಲ್ಲಿರುವ ಗಿರಿಗೌಡ ಬಡಾವಣೆಗೆ ಮಳೆಯ ನೀರು ಬಂದು ಮನೆಗಳಿಗೆ ನುಗ್ಗುತ್ತಿದೆ. ಅಲ್ಲದೆ ರಸ್ತೆ ಅವ್ಯವಸ್ಥೆಯಿಂದ ಮಹಿಳೆಯರು ಹಾಗೂ ಮಕ್ಕಳು ಸಂಚರಿಸಲು ಕಷ್ಟವಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ನಿರ್ಮಿಸಲು ಮುಂದಾದ ಸಂದರ್ಭ ರಸ್ತೆಯ ಮಾರ್ಗದಲ್ಲಿರುವ ತೆಂಗಿನ ಮರವೊಂದನ್ನು ಕಟಾವು ಮಾಡಲು ಮನೆಯ ಮಾಲೀಕರು ಬಿಡದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸಂಕಟ ಹೇಳಿದರು.
‘ಸಾರ್ವಜನಿಕರ ಹಿತದೃಷ್ಟಿಯಿಂದ ತೆಂಗಿನ ಮರ ಕಟಾವು ಮಾಡಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡದ ಹೊರತು ಮುಂಬರುವ ಚುನಾವಣೆಗೆ ಮತ ಹಾಕದೆ ಬಹಿಷ್ಕರಿಸುವುದಾಗಿ’ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಪ್ರಮುಖರಾದ ಟಿ.ಎಲ್. ಮಹೇಶ್ ನಿವಾಸಿಗಳಾದ ರಾಮಮ್ಮ, ಗೋವಿಂದ, ವನಜಾಕ್ಷಿ, ಕುಮಾರ, ಗಣೇಶ್ ಇದ್ದರು.
ಸಮಸ್ಯೆ ಶೀಘ್ರ ಇತ್ಯರ್ಥ: ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಮಾತನಾಡಿ, ‘ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಕಂಡು ಪಂಚಾಯಿತಿ ವತಿಯಿಂದ ಚರಂಡಿ ನಿರ್ಮಿಸಲು ಮುಂದಾದೆವು. ಆದರೆ ಕಾಮಗಾರಿಗೆ ಅಡ್ಡಿಯಾಗಿದ್ದ ತೆಂಗಿನ ಮರ ಕಟಾವು ಮಾಡಲು ಆ ಮರದ ಮಾಲೀಕ ಬಿಡುತ್ತಿಲ್ಲ. ಹಾಗಾಗಿ ಕಾಮಗಾರಿ ವಿಳಂಬವಾಗಿದೆ. ಸದ್ಯದಲ್ಲಿಯೇ ಸಮಸ್ಯೆ ಇತ್ಯರ್ಥ ಮಾಡುವುದಾಗಿ’ ಭರವಸೆ ನೀಡಿದರು.