ಮಡಿಕೇರಿ: ನಗರದಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಬೈಕ್ ಜಾಥಾ ಶುಕ್ರವಾರ ನಡೆಯಿತು.
ಇಲ್ಲಿನ ಎವಿ ಶಾಲೆಯಿಂದ ಇಂದಿರಾ ಗಾಂಧಿ ವೃತ್ತ (ಚೌಕಿ)ದ ಮಾರ್ಗವಾಗಿ ಸಾಗಿ ಸುದರ್ಶನ ವೃತ್ತದಿಂದ ಹಿಂತಿರುಗಿ ನಗರದ ಹಳೆ ಖಾಸಗಿ ಬಸ್ನಿಲ್ದಾಣದವರೆಗೂ ಬೈಕ್ ಜಾಥಾ ನಡೆಯಿತು. ಪಕ್ಷದ ಧ್ವಜ ಹಿಡಿದ ಕಾರ್ಯಕರ್ತರು ಸುಮಾರು 500ಕ್ಕೂ ಹೆಚ್ಚಿನ ಬೈಕ್ನಲ್ಲಿ ಹಾಗೂ 100ಕ್ಕೂ ಹೆಚ್ಚಿನ ಆಟೊಗಳಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಶಾಸಕ ಡಾ.ಮಂತರ್ಗೌಡ, ‘ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಮನೆಮನೆಗೆ ತಲುಪಿಸಬೇಕು’ ಎಂದು ಹೇಳಿದರು.
‘ಕಳೆದ ಅಷ್ಟೂ ವರ್ಷಗಳ ಕಾಲ ಇದ್ದ ಬಿಜೆಪಿ ಶಾಸಕರು ಕನಿಷ್ಠ ಎಂಆರ್ಐ ಸ್ಕ್ಯಾನಿಂಗ್ ಯಂತ್ರಗಳನ್ನು ಏಕೆ ತರಲಾಗಿಲ್ಲ’ ಎಂದೂ ಪ್ರಶ್ನಿಸಿದರು.
‘ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ. ಕೇವಲ ಬೈಕ್ ಜಾಥಾ ನಡೆಸಿ ಹೋಗುವುದಲ್ಲ. ಎಲ್ಲರೂ ಮನೆಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ಅವರನ್ನು ತಲುಪಿರುವುದನ್ನು ನೆನಪಿಸಬೇಕು. ಎಲ್ಲ ಮನೆಯ ವಿದ್ಯುತ್ ಬಿಲ್ ಉಚಿತವಾಗಿರುವುದನ್ನು ಅವರಿಗೆ ಹೇಳಬೇಕು’ ಎಂದರು.
ವಿರೋಧ ಪಕ್ಷಗಳು ಕೇವಲ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿವೆ. ಅವರ ಅಪಪ್ರಚಾರಗಳಿಗೆ ಕಿವಿಗೊಡದೆ ಸರ್ಕಾರದ ಗ್ಯಾರಂಟಿಗಳ ಕುರಿತು ಮನೆಮನೆಗೂ ಭೇಟಿ ನೀಡಿ ಅವರಿಗೆ ಹೇಳಬೇಕು ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ‘ಎಂ.ಲಕ್ಷ್ಮಣ್ ಸುಶಿಕ್ಷಿತರು ಮಾತ್ರವಲ್ಲ ಜನರ ಸಮಸ್ಯೆಗಳನ್ನು ಅರಿತವರು. ಅವರನ್ನು ಗೆಲ್ಲಿಸಿದರೆ ಖಂಡಿತ ಕೊಡಗಿನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿದ್ದಾರೆ’ ಎಂದು ಹೇಳಿದರು.
ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಕಳೆದ 10 ತಿಂಗಳುಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.