ಸುಂಟಿಕೊಪ್ಪ: ಸಮೀಪದ ಪನ್ಯದಲ್ಲಿ ನೆಲೆ ನಿಂತಿರುವ ಗ್ರಾಮದೇವತೆ ಮಳೂರು ಬೆಳ್ಳಾರಿಕಮ್ಮ ವಾರ್ಷಿಕ ಪೂಜೋತ್ಸವವು ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ಮಂದನ ಮನೆಯಿಂದ ಭಂಡಾರವನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತರುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಿತು. ನಂತರ ಎತ್ತು ಪೋರಾಟ್, ಚೌರಿ ಕುಣಿತ, ಉತ್ಸವ ಮೂರ್ತಿಯ ಕುಣಿತ ನಡೆದವು.
ಗ್ರಾಮ ದೇವತೆಗೆ ಸಂಬಂಧಿಸಿದ ಉಲುಗುಲಿ ಗ್ರಾಮದ ಪನ್ಯ, ಸುಂಟಿಕೊಪ್ಪ, ಅಂಜನಗೇರಿ ಬೆಟ್ಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು 7 ದಿನ ವೃತದಲ್ಲಿದ್ದು, ರಾತ್ರಿ ವೇಳೆ ಚೌರಿ ಮತ್ತಿತರ ಕುಣಿತಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ದೇವಿಗೆ ವಿವಿಧ ಪೂಜಾ ಆಚರಣೆಗಳನ್ನು ಕೈಗೊಂಡು ನಂತರ ದೇವಾಲಯದಲ್ಲಿಯೇ ವಾಸ್ತವ್ಯ ಹೂಡಿದ್ದರು.
ಸೋಮವಾರ ಈ ಗ್ರಾಮಕ್ಕೆ ಸಂಬಂಧಿಸಿದ ಕೊಡವ ಮತ್ತು ಗೌಡ ಸಮುದಾಯದ ಪುರುಷರು, ಯುವಕರು ಕೊಡಗಿನ ಸಾಂಪ್ರದಾಯಿಕ ಉಡುಗೆ ಕೊಡವರ ಕುಪ್ಪಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಶ್ವೇತ ವರ್ಣದ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ತಂದು ದೇವರಿಗೆ ಸಮರ್ಪಿಸಲಾಯಿತು.
ಗ್ರಾಮದ ಹಿರಿಯರು, ಕಿರಿಯರು ದೇವಾಲಯದ ಸುತ್ತ ಪ್ರದಕ್ಷಿಣೆ ಬಂದು ಈಡುಗಾಯಿ, ಎತ್ತುಪೋರಾಟ್, ಚೌರಿಕುಣಿತದ ಮೂಲಕ ಬೆಳ್ಳಾರಿಕಮ್ಮ ದೇವರ ಉತ್ಸವ ಮೂರ್ತಿಯನ್ನು ಭಕ್ತರಿಗೆ ದರ್ಶನ ನೀಡಲಾಯಿತು.
ಆನಂತರ ಮದ್ಯಾಹ್ನ ದೇವಿಗೆ ವಿಶೇಷ ಪೂಜೆ, ಅಲಂಕಾರಗಳು ನಡೆದು ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಈ ಪೂಜಾ ಕೈಂಕರ್ಯಗಳನ್ನು ಹಿರಿಯ ಅರ್ಚಕ ಹಾ.ಮಾ.ಗಣೇಶ ಶರ್ಮಾ, ಮಂಜುನಾಥ್ ಉಡುಪ, ಮಂಜುನಾಥ್ ಶರ್ಮಾ, ಜಯರಾಜು ಉಡುಪ ನೆರವೇರಿಸಿದರು.
ದೇವಾಲಯದ ಆವರಣದಲ್ಲಿರುವ ವಸಂತ ಕಟ್ಟೆಯಲ್ಲಿ ದೇವರ ಉತ್ಸವ ಮೂರ್ತಿಯ ಪೂಜೆ, ನೃತ್ಯ ಬಲಿ ಮತ್ತು ದರ್ಶನ ಬಲಿ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.
ನೆರೆದಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಅನಿಲ್ ಕುಮಾರ್, ಪೂವಯ್ಯ, ಮಾಗೀಲು ವಸಂತ, ರವಿ, ರಾಕೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.