ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾದ ನಿರಾಶ್ರಿತರಿಗೆ 100 ಮನೆಗಳನ್ನು ನೀಡುವ ಯೋಜನೆಯ ಅಡಿಯಲ್ಲಿ ಮೊದಲ ಹಂತವಾಗಿ ಸುಂಟಿಕೊಪ್ಪದ ಕುಂಬಾರಗಡಿಗೆ ಗ್ರಾಮದಲ್ಲಿ ಎರಡು ಕುಟುಂಬಗಳಿಗೆ ತಲಾ ₹ 4 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಲಯನ್ಸ್ 317 ಡಿ’ ಗವರ್ನರ್ ದೇವದಾಸ್ ಭಂಡಾರಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಲಯನ್ಸ್ ಸಂಸ್ಥೆ ಹಾಗೂ ಜಿಲ್ಲೆಯ ವಿವಿಧ ಕ್ಲಬ್ಗಳ ಸಹಕಾರದಿಂದ ಕುಂಬಾರಗಡಿಗೆ ಗ್ರಾಮದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ ಕನ್ನಿಕಂಡ ಪಾರ್ವತಿ ಹಾಗೂ ಕನ್ನಿಕಂಡ ಪೊನ್ನಪ್ಪ ಅವರಿಗೆ ಮನೆಗಳನ್ನು ಕೇವಲ ಮೂರು ತಿಂಗಳಲ್ಲಿ ನಿರ್ಮಿಸಿ ಕೊಡಲಾಗಿದೆ ಎಂದು ತಿಳಿಸಿದರು.
ಇನ್ನು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಮಳೆಯಿಂದ ಹಾನಿಯಾಗಿದ್ದ ಬಸ್ ತಂಗುದಾಣ ಹಾಗೂ ಮನೆಯಿಲ್ಲದೆ ಶಾಲೆಯಲ್ಲಿ ವಾಸವಾಗಿದ್ದ ಕುಟುಂಬವೊಂದಕ್ಕೆ ಮನೆಯನ್ನು ಕಟ್ಟಿಕೊಡಲು ಕ್ಲಬ್ ತೀರ್ಮಾನಿಸಿದೆ ಎಂದು ದೇವದಾಸ್ ಹೇಳಿದರು.
ಇನ್ನು ಸೋಮವಾರಪೇಟೆಯಲ್ಲಿ ನಿರಾಶ್ರಿತರಿಗಾಗಿ ನೀಡುತ್ತಿರುವ ಮನೆಗಳು ನಿರ್ಮಾಣ ಹಂತದಲ್ಲಿದ್ದು, ಆದಷ್ಟು ಬೇಗ ನಿರಾಶ್ರಿತರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ವಿವೇಕ್ ಬೋಪಯ್ಯ, ವಲಯ ಅಧ್ಯಕ್ಷರಾದ ಜೆ.ವಿ. ಕೋಟಿ, ಕೆ.ಕೆ. ದಾಮೋಧರ್, ತಮ್ಮಯ್ಯ, ಮುತ್ತಪ್ಪ ಹಾಜರಿದ್ದರು.