ಮಡಿಕೇರಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಎರಡು ತಿಂಗಳ ದೀರ್ಘ ರಜೆಯ ಮೇಲೆ ತೆರಳಿದ್ದಾರೆ. ಶ್ರೀವಿದ್ಯಾ ಅವರ ತಂದೆಯು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಯೋಗಕ್ಷೇಮ ನೋಡಿಕೊಳ್ಳುವ ತುರ್ತು ಇರುವ ಕಾರಣಕ್ಕೆ ರಜೆ ಹಾಕಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಕೆ. ಲಕ್ಷ್ಮಿಪ್ರಿಯಾ ಅವರು ಪ್ರಭಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಶುಕ್ರವಾರದಿಂದ ‘ಕೊಡಗು ಪ್ರವಾಸಿ ಉತ್ಸವ’ ಆರಂಭಗೊಂಡಿದ್ದು, ಅದನ್ನು ಯಶಸ್ಸುಗೊಳಿಸುವ ಜವಾಬ್ದಾರಿ ಲಕ್ಷ್ಮಿಪ್ರಿಯಾ ಅವರ ಮೇಲಿದೆ. ಅಲ್ಲದೇ, ಮಳೆಗಾಲಕ್ಕೂ ಮುನ್ನ ಸಂತ್ರಸ್ತರ 840 ಮನೆ ನಿರ್ಮಾಣವಾಗಬೇಕಿದೆ. ಜತೆಗೆ, ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಜವಾಬ್ದಾರಿಯೂ ಪ್ರಭಾರ ಜಿಲ್ಲಾಧಿಕಾರಿ ಮೇಲಿದೆ.
ರಜೆ ತೆಗೆದುಕೊಳ್ಳದೇ ಕೆಲಸ: ಕೊಡಗಿನಲ್ಲಿ ಉಂಟಾಗಿದ್ದ ಪ್ರಾಕೃತಿಕ ವಿಕೋಪದ ವೇಳೆ ಇಡೀ ಅಧಿಕಾರಿಗಳ ತಂಡ ಕಟ್ಟಿಕೊಂಡು ಜನರ ರಕ್ಷಣೆ ಮಾಡಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಇಟ್ಟುಕೊಂಡು ಅತ್ಯಂತ ಅಚ್ಚುಕಟ್ಟಾಗಿ ಜವಾಬ್ದಾರಿ ನಿಭಾಯಿಸಿದ್ದರು. ಜಿಲ್ಲಾಧಿಕಾರಿ ಕರ್ತವ್ಯವನ್ನು ಜಿಲ್ಲೆಯ ಜನರೂ ಮೆಚ್ಚಿಕೊಂಡಿದ್ದರು. ಪುನರ್ವಸತಿ ಕೆಲಸಗಳೂ ಚುರುಕಾಗುವಂತೆ ಕಾಳಜಿ ವಹಿಸಿದ್ದರು.