ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ವಿವಾಹಕ್ಕೆ ಆದ್ಯತೆ ನೀಡಿ: ಇಬ್ರಾಹಿಂ

ಅಲ್ ಅಮೀನ್ ಸಂಸ್ಥೆಯ ಸಾರ್ಥಕ ಸೇವೆ: ಸಾಮೂಹಿಕ ವಿವಾಹ
Last Updated 21 ಏಪ್ರಿಲ್ 2019, 13:52 IST
ಅಕ್ಷರ ಗಾತ್ರ

ಮಡಿಕೇರಿ: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯಿಂದ ನಗರದ ಕಾವೇರಿ ಹಾಲ್‌ನಲ್ಲಿ ಸಾಮೂಹಿಕ ವಿವಾಹ ಸಮಾರಂಭ ಭಾನುವಾರ ನೆರವೇರಿತು.

ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾತನಾಡಿ, ‘ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ವಿವಾಹ ಮಾಡುವುದಕ್ಕೆ ಬದಲಾಗಿ, ಸರಳ ವಿವಾಹಕ್ಕೆ ಒತ್ತು ನೀಡುವ ಅಗತ್ಯವಿದೆ’ ಎಂದು ಅಭಿ‍ಪ್ರಾಯಪಟ್ಟರು.

ದಶಕದ ಹಿಂದೆ ಲತೀಫ್ ಹಾಜಿ ಅವರಿಂದ ಸ್ಥಾಪಿಸಲ್ಪಟ್ಟ ಅಲ್ ಅಮೀನ್ ಸಂಘಟನೆ ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಯೋಜಿಸುತ್ತಿದೆ. ಸಮಾಜದ ಬಡ ವರ್ಗದ ಮತ್ತು ಅನಾಥ ಹೆಣ್ಣು ಮಕ್ಕಳಿಗೆ ನೂತನ ಬದುಕನ್ನು ಕಟ್ಟಿಕೊಡುವ ಸಮಿತಿ ಪ್ರಯತ್ನಕ್ಕೆ ಸಾಕಷ್ಟು ಮಂದಿ ದಾನಿಗಳು ನೆರವು ನೀಡುತ್ತಾ ಬರುತ್ತಿದ್ದಾರೆ. ಮತ್ತಷ್ಟು ಮಂದಿ ಇಂತಹ ವಿವಾಹ ಕಾರ್ಯಗಳ ಆಯೋಜನೆಗೆ ನೆರವು ನೀಡುವ ಅಗತ್ಯವಿದೆ ಎಂದು ಹೇಳಿದರು.

‘ಬಡ, ಅನಾಥ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗುವುದು ಬದುಕಿನ ಉತ್ತಮ ಕಾರ್ಯಗಳಲ್ಲಿ ಒಂದು. ಪ್ರಸ್ತುತ ವ್ಯವಸ್ಥೆಯಲ್ಲಿ ದೇವರ ಇಚ್ಛೆಗೆ ವಿರುದ್ಧವಾದ ಕೆಲಸ ಕಾರ್ಯಗಳನ್ನು ನಡೆಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಸಲ್ಲದ ಕಾರ್ಯಗಳ ಹಿನ್ನೆಲೆಯಲ್ಲಿ ಪ್ರಕೃತಿ ಮುನಿದು ಅನಾಹುತಗಳು ಘಟಿಸುತ್ತಿವೆ; ದೇವರು ಮೆಚ್ಚುವ ಒಳಿತಿನ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಕರೆ ನೀಡಿದರು.

ಬದ್ರಿಯಾ ಮಸೀದಿಯ ಖತೀಬರಾದ ಉಮರ್ ಸಖಾಫಿ ಮಾತನಾಡಿ, ಕಳೆದ 13 ವರ್ಷಗಳಲ್ಲಿ ಅಲ್ ಅಮೀನ್ ಸಂಸ್ಥೆ ನೂರಾರು ಬಡ ಮತ್ತು ಅನಾಥ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುವ ಮೂಲಕ ಅವರೆಲ್ಲರಿಗೂ ಹೊಸ ಬದುಕನ್ನು ಕಲ್ಪಸಿಕೊಡುವ ಉತ್ತಮ ಕಾರ್ಯ ಮಾಡಿದೆ ಎಂದು ನುಡಿದರು.

ಸಮಿತಿ ಪ್ರಮುಖ ಎಂ.ಇ. ಮೊಹಮ್ಮದ್ ಪ್ರಾಸ್ತಾವಿಕ ಮಾತನಾಡಿ, ಅಲ್ ಅಮೀನ್ ಸಂಸ್ಥೆ ಕಳೆದ 13 ವರ್ಷಗಳಲ್ಲಿ 331 ಅನಾಥ ಮತ್ತು ಬಡ ಹೆಚ್ಚು ಮಕ್ಕಳ ವಿವಾಹವನ್ನು ನಡೆಸಿಕೊಡುವ ಕಾರ್ಯವನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಈ ಸಾಮೂಹಿಕ ವಿವಾಹದ ಮೂಲಕ ಬದುಕು ಕಟ್ಟಿಕೊಂಡಿರುವ ದಂಪತಿ ವಿಶೇಷ ಸಭೆಯನ್ನು ನಡೆಸುವ ಉದ್ದೇಶ ಇದೆ ಎಂದು ತಿಳಿಸಿದರು. ದಾನಿಗಳಾದ ಚೇರಂಬಾಣೆಯ ಮಮ್ಮು ಹಾಜಿ ಮಾತನಾಡಿದರು.

ಸಾಮೂಹಿಕ ವಿವಾಹದಲ್ಲಿ ಮಡಿಕೇರಿ, ಕುಶಾಲನಗರ, ಕೊಪ್ಪ, ಗೊಂದಿಬಸವನಹಳ್ಳಿ, ಕರ್ಣಂಗೇರಿ, ರಂಗಸಮುದ್ರ, ಕಾನ್‌ಬೈಲ್, ಬೆಂಬಳೂರು, ಹೊಸಕೋಟೆ, ಕಂಡಕೆರೆ, ಕಡಗದಾಳು, ಶನಿವಾರಸಂತೆ, ಕೊಡ್ಲಿಪೇಟೆ, ನಾಪೋಕ್ಲು, ಅಭ್ಯತ್‌ಮಂಗಲ, ಗರಗಂದೂರು, ಗೋಣಿಕೊಪ್ಪ, ತಿತಿಮತಿ ಮತ್ತು ಪಿರಿಯಾಪಟ್ಟಣದ 24 ಬಡ ಮತ್ತು ಅನಾಥ ಹೆಣ್ಣು ಮಕ್ಕಳು ನವಜೀವನಕ್ಕೆ ಕಾಲಿರಿಸಿದರು. ಪ್ರತಿ ವಧುವಿಗೆ ಸಮಿತಿಯಿಂದ ಚಿನ್ನಾಭರಣ, ಉಡುಪು ಮತ್ತು ವರನಿಗೆ ವಸ್ತ್ರಗಳನ್ನು ಉಚಿತವಾಗಿ ನೀಡಲಾಯಿತು.

ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಎಫ್.ಎ. ಮೊಹಮ್ಮದ್, ಕೇರಳದ ವಡಗರದ ಅಬ್ದುಲ್ ಸಲಾಂ ಖಾಸಿಮಿ ತಂಞಳ್ ಮತ್ತು ಮೊಹಮ್ಮದ್ ಫೈಝಿ, ಸಿ.ಎಂ. ಸೋಮಯ್ಯ, ಪೆರುಂಬಾಡಿ ಯತೀಂಖಾನದ ಅಧ್ಯಕ್ಷ ಬಷೀರ್ ಹಾಜಿ, ದಾನಿಗಳಾದ ಚೆನ್ನೈನ ಉದ್ಯಮಿ ಸದಕ್ ಆಲಿ, ಉದ್ಯಮಿ ಎಸ್.ಎಂ. ಹುಸೈನ್ ಉಪಸ್ಥಿತರಿದ್ದರು.

ಬದ್ರಿಯಾ ಮಸೀದಿ ಖತೀಬರಾದ ಉಮರ್ ಸಖಾಫಿ ಪ್ರಾರ್ಥಿಸಿದರು. ಸಮಿತಿಯ ಪ್ರಚಾರ ಕಾರ್ಯದರ್ಶಿ ಎಂ.ಇ. ಮೊಯಿದ್ದೀನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT